ಕುಮಟಾ ಮಿರ್ಜಾನ್ ಬಳಿಯಿರುವ ತಾರಿಬಾಗಿಲಿನ ಮಹಮದ್ ಗೌಸ್ ಅವರ ಪಾಳು ಬಿದ್ದ ಕೋಣೆಯಲ್ಲಿ ರಾಶಿ ರಾಶಿ ಅಕ್ಕಿ ಮೂಟೆಗಳನ್ನು ದಾಸ್ತಾನು ಮಾಡಲಾಗಿದೆ. ಸರ್ಕಾರದಿಂದ ಬಡವರಿಗೆ ವಿತರಣೆ ಆಗಬೇಕಿದ್ದ ಅಕ್ಕಿಯನ್ನು ಇಲ್ಲಿ ಕದ್ದು-ಮುಚ್ಚಿ ಶೇಖರಿಸಿಡಲಾಗಿದೆ.
ಈ ಬಗ್ಗೆ ಮಾಹಿತಿ ಅರಿತ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ರಹಸ್ಯ ಕಾರ್ಯಾಚರಣೆ ನಡೆಸಿ, ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆದಿದ್ದಾರೆ. ಮಹಮ್ಮದ್ ಗೌಸ್ ಮೈದಿನ್ ಸಾಬ ಆಗಾ ಅವರು ತಮ್ಮ ಮಾಲಿಕತ್ವದ ಪಾಳು ಬಿದ್ದ ಕಟ್ಟಡದಲ್ಲಿ 63 ಚೀಲ ಅಕ್ಕಿ ಅಡಗಿಸಿಟ್ಟಿರುವುದು ಈ ವೇಳೆ ಬೆಳಕಿಗೆ ಬಂದಿದೆ. ಸರ್ಕಾರ ಬಡವರಿಗೆ ವಿತರಿಸಿದ ಅಕ್ಕಿಯನ್ನು ಮಹಮ್ಮದ್ ಗೌಸ್ ಅವರು ಹಣದ ಆಮೀಷ ಒಡ್ಡಿ ಬಡವರಿಂದ ಕಸಿದುಕೊಳ್ಳುತ್ತಿರುವುದು ವಿಚಾರಣೆ ವೇಳೆ ಗೊತ್ತಾಗಿದೆ. ಆ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಹಮದ್ ಗೌಸ್ ಮಾರಾಟ ಮಾಡುತ್ತಿರುವ ಬಗ್ಗೆ ಅಂದಾಜಿಸಲಾಗಿದೆ.
ಕಟ್ಟಡದಲ್ಲಿ ಸಿಕ್ಕ ಅಕ್ಕಿಯನ್ನು ಅಧಿಕಾರಿಗಳು ತೂಕ ಮಾಡಿದ್ದಾರೆ. 59 ಪ್ಲಾಸ್ಟಿಕ್ ಚೀಲ ಹಾಗೂ 3 ಗೋಣಿ ಚೀಲದಲ್ಲಿದ್ದ ಒಟ್ಟು ಅಕ್ಕಿ ತೂಕ ಮಾಡಿದಾಗ 29 ಕ್ವಿಂಟಲ್ ಅಕ್ಕಿ ಸಿಕ್ಕಿದೆ. ಸರ್ಕಾರಿ ಲೆಕ್ಕಾಚಾರದಂತೆ 99ಸಾವಿರ ರೂ ಮೌಲ್ಯದ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಪೊಲೀಸರು, ಆಹಾರ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಸದ್ಯ ವಶಕ್ಕೆಪಡೆದ ಅಕ್ಕಿಯನ್ನು ಬಾಡ ಹೊಲನಗದ್ದೆಯಲ್ಲಿರುವ ರೈತ ಸೇವಾ ಸಹಕಾರಿ ಸಂಘದ ಉಸ್ತುವಾರಿಗೆ ಕೊಡಲಾಗಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.