ಭಟ್ಕಳದ ಕಸಾಯಿಖಾನೆಗೆ ಹೋಗುತ್ತಿದ್ದ ಮೂರು ದಷ್ಟಪುಷ್ಟ ಹೋರಿಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆಪಡೆದಿದ್ದಾರೆ. ಗುಳ್ಳಾಪುರದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಆ ಗೋವುಗಳನ್ನು ಬಿಡುವಂತೆ ಒತ್ತಡ ಬಂದಿದ್ದು, ಪ್ರಭಾವಿಗಳ ಒತ್ತಡಕ್ಕೂ ಮಣಿಯದೇ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ಒಂದೇ ಕಂಟೇನರಿನಲ್ಲಿ ಮೂರು ಹೋರಿಗಳನ್ನು ಸಾಗಿಸಲಾಗುತ್ತಿತ್ತು. ರಾಜಾರೋಷವಾಗಿ ಕಳ್ಳ ಸಾಗಾಣಿಕೆ ನಡೆದಿದ್ದರೂ ಅದನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಅನುಮತಿ ಇಲ್ಲದೇ ಗೋ ಸಾಗಾಟ ನಡೆದ ಬಗ್ಗೆ ಯಲ್ಲಾಪುರ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ಸಿಬ್ಬಂದಿ ಆ ಕಂಟೇನರ್’ನ್ನು ತಡೆದರು. ಒಳಗಿದ್ದ ಭಾರೀ ಗಾತ್ರದ ಗೋವುಗಳನ್ನು ಗಮನಿಸಿ ದಾಖಲೆ ಕೇಳಿದರು.
ಯಾವುದೇ ದಾಖಲೆಗಳಿಲ್ಲದೇ ಜಾನುವಾರು ಸಾಗಾಟ ನಡೆದಿರುವುದು ಗಮನಕ್ಕೆ ಬಂದಿತು. ಪ್ರತಿ ಗೋವು 5-6 ಲಕ್ಷ ರೂ ಬೆಲೆ ಬಾಳುವಂತದ್ದಾಗಿದ್ದು, ಅದನ್ನು ಬಿಡಿಸಿಕೊಳ್ಳಲು ಅಕ್ರಮ ಗೋ ಸಾಗಾಟಕಾರರ ಒತ್ತಡಗಳು ಬಂದವು. ಆದರೆ, ಆ ಒತ್ತಡಕ್ಕೆ ಪೊಲೀಸರು ಮಣಿಯಲಿಲ್ಲ. ಸಾರ್ವಜನಿಕರ ಸಹಕಾರದಲ್ಲಿ ಗೋವುಗಳನ್ನು ರಕ್ಷಿಸಿದರು. ಜೊತೆಗೆ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.