ಸ್ವಂತ ಕೃಷಿ ಮಾಡಲು ಆಗದ ನಿವೃತ್ತ ಅರಣ್ಯ ಸಂರಕ್ಷಾಧಿಕಾರಿ ಮಹದೇವ ನಾಯ್ಕ ಅವರು ಜೊಯಿಡಾದಲ್ಲಿರುವ ತಮ್ಮ ಅಡಿಕೆ ತೋಟದ ನಿರ್ವಹಣೆ ಹಾಗೂ ಫಲಗುತ್ತಿಗೆ ಹೊಣೆಯನ್ನು ಸಿದ್ದಾಪುರದ ಮೈದಿನ್ ಖಾನ್ ಅವರಿಗೆ ವಹಿಸಿದ್ದಾರೆ. ಆದರೆ, ಮೈದಿನ್ ಖಾನ್ ಅವರು ನಿರ್ವಹಣೆ ಮಾಡದೇ ತೋಟದಲ್ಲಿ ಬೆಳೆದಿದ್ದ 30 ಕ್ವಿಂಟಲ್ ಅಡಿಕೆ ಕದ್ದು ಪರಾರಿಯಾಗಿದ್ದಾರೆ!
ಮಹದೇವ ನಾರಾಯಣ ನಾಯ್ಕ ಅವರು ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ನಿವೃತ್ತಿ ನಂತರ ಅವರು ಧಾರವಾಡಕ್ಕೆ ಹೋಗಿ ವಾಸವಾಗಿದ್ದರು. 75 ವರ್ಷವಾದ ಹಿನ್ನಲೆ ಕೃಷಿ ಕೆಲಸ ಅಸಾಧ್ಯ ಎಂದು ಭಾವಿಸಿ ಅವರು ತೋಟದ ನಿರ್ವಹಣೆಯನ್ನು ಸಿದ್ದಾಪುರ ಕಾನಸೂರಿನ ಮೈದಿನ್ ಖಾನ್ ಹಾಗೂ ಅವರ ತಂದೆ ಅಬ್ದುಲ್ ಖಾನ್ ಅವರಿಗೆ ವಹಿಸಿದ್ದರು. ಈ ಬಗ್ಗೆ 2025ರ ಮೇ ಮಾಸದಲ್ಲಿ ಒಪ್ಪಂದ ಮಾಡಿಕೊಂಡಿದ್ದರು.
ಆ ಪ್ರಕಾರ, ಜೊಯಿಡಾದ ಉಳುವಿಯಲ್ಲಿರುವ 9 ಎಕರೆ ಕ್ಷೇತ್ರದಲ್ಲಿ 8 ಎಕರೆ ಅಡಿಕೆ ತೋಟದ ನಿರ್ವಹಣೆಯನ್ನು ಮೈದಿನ್ ಖಾನ್ ಹಾಗೂ ಅವರ ತಂದೆ ಅಬ್ದುಲ್ ಖಾನ್ ಅವರು ಮಾಡಬೇಕಿತ್ತು. ಅಲ್ಲಿ ಬೆಳೆಯಲಾದ ಎಲ್ಲಾ ಫಸಲುಗಳು ಮೈದಿನ್ ಖಾನ್ ಹಾಗೂ ಅವರ ತಂದೆಗೆ ಸೇರಬೇಕಾಗಿದ್ದು, ಇದಕ್ಕೆ ಪ್ರತಿಯಾಗಿ 2 ಲಕ್ಷ ರೂ ಹಣವನ್ನು ಅವರಿಬ್ಬರು ಸೇರಿ ಮಹದೇವ ನಾಯ್ಕ ಅವರಿಗೆ ಕೊಡಬೇಕಿತ್ತು. ಜೊತೆಗೆ ತೋಟದ ಕಳೆ ತೆಗೆಯುವುದು, ನೀರು ಬಿಡುವುದು, ತಂತಿ ಕಂಬ ಸರಿ ಮಾಡಿ, ಸೋಲಾರ್ ಕಂಬ ಸುವ್ಯವಸ್ಥೆಯಲ್ಲಿರಿಸುವುದು ಹಾಗೂ ಅಲ್ಲಿದ್ದ ಮನೆಯನ್ನು ಸರಿಯಾಗಿರಿಸಿಕೊಳ್ಳು ಜವಾಬ್ದಾರಿ ಮೈದಿನ್ ಖಾನ್ ಅವರದ್ದಾಗಿತ್ತು.
ಈ ಒಪ್ಪಂದಕ್ಕೆ ಬದ್ಧರಾಗಿ ಮೈದಿನ್ ಖಾನ್ ಅವರು ಸಹಿ ಹಾಕಿದ್ದರು. 2025ರ ಮೇ ತಿಂಗಳಿನಲ್ಲಿ ಒಪ್ಪಂದ ಮುಕ್ತಾಯವಾಗಲಿದ್ದು, ಒಂದು ವರ್ಷದವರೆಗೆ ನೋಡಿ ನಂತರ ಒಪ್ಪಂದ ಮುಂದುವರೆಸಲು ಮಹಾದೇವ ನಾಯ್ಕ ಅವರು ನಿರ್ಧರಿಸಿದ್ದರು. ಅಗಸ್ಟ 15ರಂದು ಮಹದೇವ್ ನಾಯ್ಕ ಅವರು ತೋಟಕ್ಕೆ ಬಂದಾಗ ಒಳ್ಳೆಯ ಫಸಲು ಬಂದಿತ್ತು. ಅಲ್ಲಿನ ನಿರ್ವಹಣೆಯೂ ಚನ್ನಾಗಿತ್ತು. ಮೈದೀನ್ ಖಾನ್ ಅವರು ವೆಂಕಟ್ರಮಣ ನಾಯ್ಕ ಎಂಬಾತರನ್ನು ಕೆಲಸಕ್ಕೆ ನೇಮಿಸಿ ದುಡಿಸುತ್ತಿದ್ದರು. ಮಹಾದೇವ ನಾಯ್ಕ ಅವರು ವೆಂಕಟ್ರಮಣ ನಾಯ್ಕ ಹಾಗೂ ಇನ್ನಿತರ ಆಳುಗಳ ಜೊತೆ ಮಾತನಾಡಿ ಧಾರವಾಡಕ್ಕೆ ಮರಳಿದ್ದರು.
2026ರ ಜನವರಿ 11ರಂದು ಮತ್ತೆ ಮಹಾದೇವ ನಾಯ್ಕ ಅವರು ತಮ್ಮ ತೋಟಕ್ಕೆ ಭೇಟಿ ನೀಡಿದರು. ಆಗ, ತೋಟ ನಿರ್ವಹಣೆ ಮಾಡದೇ ಹಾಳಾಗಿದ್ದವು. ಅಲ್ಲಿ ಬೆಳೆದಿದ್ದ 30 ಕ್ವಿಂಟಲ್ ಅಡಿಕೆ ಫಸಲು ಸಹ ಕಾಣುತ್ತಿರಲಿಲ್ಲ. ಕರಾರಿನ ಪ್ರಕಾರ ಮಹಾದೇವ ನಾಯ್ಕ ಅವರಿಗೆ 2 ಲಕ್ಷ ರೂ ಹಣ ಸಹ ಬಂದಿರಲಿಲ್ಲ. ತೋಟದಲ್ಲಿದ್ದ ಅಲ್ಲಿದ್ದ ಸಾಗವಾನಿ ಹಲಗೆ, ಕತ್ತಿ, ಸಲಕೆ, ಕೊಡಲಿ, ಪಿಕಾಸಿ ಸಹ ಕಾಣಲಿಲ್ಲ. ಅಲ್ಲಿದ್ದ ಸಾಮಗ್ರಿ, ಅಡಿಕೆ ಫಸಲಿನ ಜೊತೆ 2 ಲಕ್ಷ ರೂ ಹಣವನ್ನು ಸಹ ಕೊಡದೇ ಮೈದಿನ್ ಖಾನ್ ಹಾಗೂ ಅವರ ತಂದೆ ಅಬ್ದುಲ್ ಖಾನ್ ಪರಾರಿಯಾಗಿದ್ದರು.
ಅವರಿಂದ ಆದ ಮೋಸದ ಬಗ್ಗೆ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಹದೇವ ನಾರಾಯಣ ನಾಯ್ಕ ಅವರು ಪೊಲೀಸ್ ದೂರು ನೀಡಿದರು. ಜೊಯಿಡಾ ಪೊಲೀಸರು ಪ್ರಕರಣ ದಾಖಲಿಸಿದರು.