ಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ ನಡೆಯುತ್ತಿರುವ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಳವಳವ್ಯಕ್ತಪಡಿಸಿದೆ. ಸಿಸಿ ಕ್ಯಾಮರಾ ಪರಿಶೀಲನೆ ಆಧಾರದಲ್ಲಿ ಗೋ ಕಳ್ಳರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ವೇದಿಕೆಯವರು ಆಗ್ರಹಿಸಿದ್ದಾರೆ.
`ಯಲ್ಲಾಪುರದ ರಾಮಾಪುರ, ಸಹಸ್ರಳ್ಳಿ, ರಾಮನಕೊಪ್ಪ ಸೇರಿ ಸುತ್ತಲಿನ ಹಲವು ಕಡೆ 25ಕ್ಕೂ ಅಧಿಕ ಗೋವುಗಳ ಕಳ್ಳತನ ನಡೆದಿದೆ’ ಎಂದು ಹಿಂದೂ ಜಾಗರಣಾ ವೇದಿಕೆಯವರು ಹೇಳಿದ್ದಾರೆ. ಶುಕ್ರವಾರ ರಾತ್ರಿ 2 ಗಂಟೆ ಅವಧಿಗೆ ಶಿರಸಿ ರಸ್ತೆಯ ಹೆಸ್ಕಾಂ ಕಚೇರಿ ಬಳಿ ದುರುಳರು ಗೋವನ್ನು ಅಪಹರಿಸಿದ್ದಾರೆ. ಜಾತ್ರೆ ಅಂಗವಾಗಿ ಪ್ರದರ್ಶನವಾಗುತ್ತಿರುವ ನಾಟಕ ಮುಗಿಸಿ ಮನೆಗೆ ಮರಳುತ್ತಿರುವವರು ಒತ್ತಾಯಪೂರ್ವಕವಾಗಿ ಗೋವನ್ನು ಹೊಡೆದುಕೊಂಡು ಹೋಗುವವರನ್ನು ನೋಡಿದ್ದಾರೆ. ನಂತರ ಆ ಕೆಂಪು ಬಣ್ಣದ ಕರು ಕಲ್ಪನಾ ನಾಯ್ಕ ಅವರಿಗೆ ಸೇರಿದ್ದು ಎಂದು ಗೊತ್ತಾಗಿದ್ದು, ಈವರೆಗೂ ಆ ಕರು ಕೊಟ್ಟಿಗೆಗೆ ಮರಳಿಲ್ಲ’ ಎಂದು ಹಿಂದು ಜಾಗರಣಾ ವೇದಿಕೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
`ಇಲ್ಲಿ ಅಪಹರಿಸಲಾದ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿರುವ ಬಗ್ಗೆ ಮಾಹಿತಿಯಿದೆ. ಈ ಹಿನ್ನಲೆ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸಬೇಕು. ರೈತರು ಸಾಕುತ್ತಿರುವ ಗೋವುಗಳು ಕಟುಕರ ಪಾಲಾಗುವುದನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ. ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ಮನವಿ ಸಲ್ಲಿಸಿದ ಗೋ ರಕ್ಷಕರು ಅದಾದ ನಂತರ ತಹಶೀಲ್ದಾರರನ್ನು ಭೇಟಿ ಮಾಡಿದ್ದಾರೆ. `ಬೆಳಗ್ಗೆ ಮೇವಿಗೆ ಬಿಟ್ಟ ಹಸುಗಳು ಸಂಜೆಯಾದರೂ ಮನೆಗೆ ಮರಳುತ್ತಿಲ್ಲ. ಎಲ್ಲಾ ಕಡೆ ಹುಡುಕಿದಾಗಲೂ ಸಿಗದ ಕಾರಣ ಅವುಗಳನ್ನು ಕಟುಕರು ಅಪಹರಿಸಿದ ಅನುಮಾನಗಳಿದ್ದು, ಈ ಬಗ್ಗೆ ನಿಗಾವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ. 17 ಜನ ಸಮಾನ ಮನಸ್ಕರು ಈ ಬಗ್ಗೆ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ.
Advertisement. Scroll to continue reading.