ಸಿದ್ದಾಪುರದ ಹೊಳೆಜಡ್ಡಿ ಸೇತುವೆ ಬಳಿ ರಾತ್ರಿ ವೇಳೆ ಹರಟೆ ಹೊಡೆಯುತ್ತಿದ್ದ ಮೂವರು ಕೊಪ್ಪದಜಡ್ಡಿಯ ಸುಬ್ರಹ್ಮಣ್ಯ ಹೆಗಡೆ ಅವರ ಕಾಲು ಸುಟ್ಟಿದ್ದಾರೆ. ಹೆಗಡೆ ಅವರನ್ನು ಹಿಡಿದುಕೊಂಡ ಆ ಆಗಂತುಕರು ಅವರದ್ದೇ ಬೈಕಿನ ಸೈಲನ್ಸರ್ ಪೈಪಿಗೆ ಕಾಲು ತಾಗಿಸಿ ನೋವು ಮಾಡಿದ್ದಾರೆ.
ಸಿದ್ದಾಪುರದ ಹುಲ್ಲುಂಡೆ ಬಳಿಯ ಕೊಪ್ಪದಜಡ್ಡಿಯಲ್ಲಿ ಸುಬ್ರಹ್ಮಣ್ಯ ಅನಂತ ಹೆಗಡೆ (30) ಅವರು ವಾಸವಾಗಿದ್ದಾರೆ. ಆಶಿರ್ವಾದ ಕಂಪನಿಯಲ್ಲಿ ಅವರು ಕೆಲಸ ಮಾಡಿಕೊಂಡಿದ್ದು, ತೋಟದ ಕೆಲಸವನ್ನು ಸಹ ನಿಭಾಯಿಸುತ್ತಿದ್ದಾರೆ. ಹೀಗಿರುವಾಗ ಫೆಬ್ರವರಿ 19ರ ರಾತ್ರಿ ಅವರು ತಮ್ಮ ತೋಟದ ಕೆಲಸಕ್ಕೆ ಬಂದಿದ್ದ ಕಲ್ಲರೆಯ ರಾಜು ಗೌಡ ಅವರನ್ನು ಮನೆಗೆ ಬಿಡಲು ಹೊರಟಿದ್ದರು. ಆ ದಿನ ರಾತ್ರಿ ಹೊಳೆಜಡ್ಡಿ ಸೇತುವೆ ಮೇಲೆ ಹರಟೆ ಹೊಡೆಯುತ್ತಿದ್ದ ಹೆಗ್ಗಾರಬೈಲಿನ ಅಣ್ಣಪ್ಪ, ಕಲ್ಲಾರೆ ಬಳಿಯಿರುವ ಹುಲ್ಲುಂಡೆಯ ಮಂಜು ಗೌಡ, ಅದೇ ಊರಿನ ಗಣಪತಿ ಗೌಡ ಸೇರಿ ಸುಬ್ರಹ್ಮಣ್ಯ ಹೆಗಡೆ ಅವರ ಮೇಲೆ ದಬ್ಬಾಳಿಕೆ ನಡೆಸಿದರು.
ಸುಬ್ರಹ್ಮಣ್ಯ ಹೆಗಡೆ ಹಾಗೂ ರಾಜು ಗೌಡ ಅವರು ಬೈಕಿನಲ್ಲಿ ಹೋಗುತ್ತಿರುವಾಗ ರಾಜು ಗೌಡ ಅವರು ಸೇತುವೆ ಬಳಿ ಆ ಮೂವರು ನಿಂತಿದನ್ನು ನೋಡಿದರು. `ಬೈಕನ್ನು ಸ್ವಲ್ಪ ನಿಲ್ಲಿಸಿ’ ಎಂದು ರಾಜು ಗೌಡ ಅವರು ಮನವಿ ಮಾಡಿದರು. ಆಗ, ಸುಬ್ರಹ್ಮಣ್ಯ ಹೆಗಡೆ ಅವರು ಬೈಕು ನಿಲ್ಲಿಸಿ, `ಬೇಗ ಬಾ. ಟೈಂ ಆಗಿದೆ’ ಎಂದು ರಾಜು ಗೌಡ ಅವರಿಗೆ ಸೂಚನೆ ನೀಡಿದರು. ಈ ಸೂಚನೆ ಸಹಿಸದ ಹೆಗ್ಗಾರಬೈಲಿನ ಅಣ್ಣಪ್ಪ, ಹುಲ್ಲುಂಡೆಯ ಮಂಜು ಗೌಡ ಹಾಗೂ ಗಣಪತಿ ಗೌಡ ಅವರು ಸುಬ್ರಹ್ಮಣ್ಯ ಹೆಗಡೆ ಅವರ ಮೇಲೆ ತಿರುಗಿ ಬಿದ್ದರು.
Advertisement. Scroll to continue reading.
ಹುಲ್ಲುಂಡೆ-ದನಳ್ಳಿ ರಸ್ತೆ ಮಾರ್ಗವಾಗಿ ಹೋಗಬೇಕಿದ್ದ ಸುಬ್ರಹ್ಮಣ್ಯ ಹೆಗಡೆ ಅವರನ್ನು ಅಣ್ಣಪ್ಪ ಅವರು ಅಡ್ಡಗಟ್ಟಿ ಬೈಕಿನಿಂದ ದೂಡಿದರು. ಉಳಿದವರು ಸುಬ್ರಹ್ಮಣ್ಯ ಹೆಗಡೆ ಅವರನ್ನು ಹಿಡಿದು ಅವರ ಕಾಲನ್ನು ಬೈಕಿನ ಸೈಲೆನ್ಸರಿಗೆ ತಾಗಿಸಿದರು. ಇದರಿಂದ ಹೆಗಡೆ ಅವರ ಎಡಗಾಲಿನ ಪಾದದ ಭಾಗ ಸುಟ್ಟು ನೋವಾಯಿತು. ಇಷ್ಟಕ್ಕೆ ಸುಮ್ಮನಾಗದ ಆ ಮೂವರು ಆರೋಪಿತರು `ನಿನ್ನ ಮನೆಗೆ ಬೆಂಕಿ ಹಾಕಿ ಸಾಯಿಸುವೆ’ ಎಂದು ಹೆದರಿಸಿದರು. ಆ ವೇಳೆ ಅಲ್ಲಿಂದ ತಪ್ಪಿಸಿಕೊಂಡ ಹೆಗಡೆ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಕೋರಿದರು. ಕಿಡಿಗೇಡಿಗಳ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.