ಕಾoಡ್ಲಾ ಕಾಡಿನ ನಡುವೆ ಸಿಕ್ಕಿಬಿದ್ದು ಅಸ್ವಸ್ಥಗೊಂಡಿದ್ದ 130 ಕೆಜಿ ತೂಕದ ಕಡಲ ಆಮೆಯನ್ನು ಕಾರವಾರ ಅರಣ್ಯ ಅಧಿಕಾರಿಗಳು ರಕ್ಷಿಸಿದ್ದು, ಆ ಆಮೆಯನ್ನು ಆರೈಕೆ ಮಾಡಿ ಸಮುದ್ರಕ್ಕೆ ಬಿಟ್ಟಿದ್ದಾರೆ.
ಕಾಳಿ ನದಿ ಸಮುದ್ರ ಸೇರುವ ಸಂಗಮ ಪ್ರದೇಶದ ಮೂಲಕ ಆಳ ಸಮುದ್ರದ ಆಮೆ ನದಿಯ ಕಡೆ ಬಂದಿತ್ತು. ನಂತರ ಮರಳಿ ಸಮುದ್ರಕ್ಕೆ ಸಂಚರಿಸಲಾಗದೇ ಕಾಂಡ್ಲಾ ಗಿಡಗಳ ಬೇರಿನ ಅಡಿ ಸಿಕ್ಕಿ ಬಿದ್ದಿತ್ತು. ಅಂದಾಜು 60 ವರ್ಷ ವಯಸ್ಸಿನ ಈ ಆಮೆ ಬರಬ್ಬರಿ 130 ಕೆಜಿ ತೂಕವಿದ್ದು, ಭಾರೀ ಗಾತ್ರದ ಆಮೆಯನ್ನು ನೋಡಲು ಅನೇಕರು ಮುಗಿ ಬಿದ್ದಿದ್ದರು.
ಅಪರೂಪದಲ್ಲಿಯೇ ಅಪರೂಪಕ್ಕೆ ಸಿಕ್ಕಿರುವ ಕಡಲ ಆಮೆ ಹಸಿರು ಬಣ್ಣದಿಂದ ಕೂಡಿದ್ದು, ಸಂತೋಷಿಮಾತಾ ದೇಗುಲದ ಅಂಚಿನ ಪ್ರದೇಶವನ್ನು ಸುತ್ತು ಹೊಡೆದಿತ್ತು. ಅದಾದ ನಂತರ ಮುಂದೆ ಚಲಿಸಲಾಗದೇ ಸುಸ್ತಾಗಿತ್ತು. ಪರಿಸರ ಆಸಕ್ತರು ಆ ಆಮೆಯನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು. ಆಮೆ ಅಸ್ವಸ್ಥವಾಗಿರುವ ಬಗ್ಗೆ ಅರಿತ ಅರಣ್ಯ ಇಲಾಖೆಯವರು ಅದನ್ನು ಮಣ್ಣಿನ ರಾಡಿಯಿಂದ ಹೊರಗೆಳೆದು ಸ್ವಚ್ಛ ಮಾಡಿದರು. ಗೋವಾದಿಂದ ನುರಿತ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರು.
ಎರಡು ದಿನ ಆರಾಮ್ ಮಾಡಿದ ಆಮೆ ಇದೀಗ ಸುಧಾರಿಸಿಕೊಂಡಿದ್ದು, ಅದನ್ನು ಸಮುದ್ರ ತೀರಕ್ಕೆ ತಂದು ಬಿಟ್ಟರು. ಆಳ ಸಮುದ್ರ ನೋಡಿದ ತಕ್ಷಣ ಆಮೆ ಉತ್ಸಾಹದಿಂದ ಈಜಲು ಶುರು ಮಾಡಿತು. ಉಪ್ಪು ನೀರಿನಲ್ಲಿ ಆ ಆಮೆ ಲವಲವಿಕೆಯಿಂದ ಹೆಜ್ಜೆ ಹಾಕಿತು. ಅನೇಕರು ಆಮೆಯ ಓಡಾಟ-ಒಡನಾಟವನ್ನು ಚಿತ್ರಿಸಿಕೊಂಡರು.