`ವಿದೇಶಿ ಸಂಸ್ಕೃತಿಯ ಆರಾಧನೆಯಿಂದ ಹಿಂದು ಪರಂಪರೆ, ಆಚಾರ-ವಿಚಾರಗಳು ಅವನತಿಯ ಕಡೆ ಸಾಗುತ್ತಿದೆ’ ಎಂದು ಸಿದ್ದಾಪುರದ ಶ್ರೀ ಮನ್ನಲೆಮಾವು ಮಠ ಶ್ರೀ ಶ್ರೀಮಾಧವಾನಂದ ಭಾರತಿ ಶ್ರೀಗಳು ಕಳವಳವ್ಯಕ್ತಪಡಿಸಿದ್ದಾರೆ.
ಅಂಕೋಲಾ ಅಲಗೇರಿಯಲ್ಲಿ ನಡೆದ ಹಿಂದು ಸಮಾಜೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು `ವಿದೇಶಿ ಸಂಸ್ಕೃತಿಯ ಅತಿಯಾದ ಪ್ರಭಾವದಿಂದ ನಮ್ಮ ಪಾರಂಪರಿಕ ಆಚಾರ, ವಿಚಾರಗಳು ನಿಧಾನವಾಗಿ ಮರೆಯಾಗುತ್ತಿದೆ. ಹಿಂದು ಸಂಸ್ಕೃತಿ ಉಳಿಸಲು ಎಲ್ಲರೂ ಪಣತೊಡಬೇಕು’ ಎಂದು ಕರೆ ನೀಡಿದ್ದಾರೆ. `ಯಾವುದು ಕೆಟ್ಟದು, ಯಾವುದು ಅಧರ್ಮ, ಯಾವುದು ಸರಿಯಾದ ಮಾರ್ಗವಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಕೆಟ್ಟದನ್ನು ತ್ಯಜಿಸುವವನೇ ನಿಜವಾದ ಹಿಂದು ಎಂದು ಅರಿತು ಜೀವನ ನಡೆಸಬೇಕು’ ಎಂದವರು ಕಿವಿಮಾತು ಹೇಳಿದ್ದಾರೆ.
`ನಮ್ಮ ಪೂರ್ವಜರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದು ನಮ್ಮ ಕರ್ತವ್ಯ. ಆಧುನಿಕ ಜೀವನದ ಒತ್ತಡ ಎಷ್ಟೇ ಇದ್ದರೂ, ಮನೆಯಲ್ಲೊಂದು ದೀಪ ಹಚ್ಚುವುದು, ದೇವಸ್ಥಾನಕ್ಕೆ ತೆರಳುವುದು, ಸಂಜೆಯ ಹೊತ್ತಿನಲ್ಲಿ ಭಜನೆ ಮಾಡುವಂತಹ ಪವಿತ್ರ ಆಚರಣೆಗಳನ್ನು ಎಂದಿಗೂ ಬಿಡಬಾರದು’ ಎಂದವರು ಹೇಳಿದ್ದಾರೆ. `ಇಂದಿನ ದಿನಗಳಲ್ಲಿ ಸಂಜೆ ಆರು ಗಂಟೆ ಆಗುತ್ತಲೇ ಮನೆಯ ಎಲ್ಲರೂ ಟಿವಿ ಮುಂದೆ ಕುಳಿತು ಧಾರಾವಾಹಿಗಳಲ್ಲಿ ಮುಳುಗುತ್ತಿರುವುದು ವಿಷಾದಕರ ಸಂಗತಿ. ಭಜನೆ, ಪ್ರಾರ್ಥನೆ, ಆತ್ಮಶುದ್ಧಿಯಂತಹ ಸಂಸ್ಕೃತಿಯ ಅಂಶಗಳು ಹಿನ್ನಡೆಯಾಗುತ್ತಿವೆ. ಈ ಸ್ಥಿತಿಯನ್ನು ತಪ್ಪಿಸಬೇಕು, ನಮ್ಮ ಸಂಸ್ಕೃತಿಯನ್ನು ಮತ್ತೆ ಮನೆಮನೆಯೊಳಗೆ ಜೀವಂತಗೊಳಿಸಬೇಕು’ ಎಂದವರು ಕರೆ ನೀಡಿದ್ದಾರೆ.
`ಮಕ್ಕಳಿಗೆ ಊಟ ಮಾಡಿಸುವ ಸಂದರ್ಭದಲ್ಲೂ ರಾಮಾಯಣ, ಮಹಾಭಾರತ, ಪುರಾಣಗಳ ಕಥೆಗಳನ್ನು ಹೇಳುವ ಸಂಸ್ಕೃತಿ ನಶಿಸುತ್ತಿದ್ದು, ಅದರ ಬದಲು ಮೊಬೈಲ್ ನೀಡುವ ದುಷ್ಪ್ರವೃತ್ತಿ ಹೆಚ್ಚಾಗಿದೆ. ಇದು ಸಮಾಜದ ಪತನಕ್ಕೆ ದಾರಿ ಮಾಡಿಕೊಡುತ್ತಿದೆ. ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಈ ಮಾಧ್ಯಮಗಳ ದುರುಪಯೋಗವೇ ಒಂದು ಪ್ರಮುಖ ಕಾರಣವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದರು. ಸಮ್ಮೆಳನದ ಸಮಿತಿ ಅಲಗೇರಿ ಮಂಡಳದ ಸದಸ್ಯೆ ಶೋಬಾ ಆಗೇರ, ಹಿಂದೂ ಸಮ್ಮೆಳನದ ಸಮಿತಿ ತಾಲೂಕಾಧ್ಯಕ್ಷ ನಾಗೇಶ ನಾಯ್ಕ, ಸಮ್ಮೆಳನದ ಸಮಿತಿ ಅಲಗೇರಿ ಮಂಡಳದ ಅಧ್ಯಕ್ಷ ಗಣೇಶ ಚಿನ್ನಾ ನಾಯ್ಕ, ಪ್ರಮುಖರಾದ ಸುರೇಶ ವೆರ್ಣೇಕರ, ನಾಗರಾಜ ಎಸ್ ನಾಯ್ಕ, ಆನಂದ ಎಚ್ ಗಾಂವಕರ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ಈಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ನಡೆಯಿತು.