ಕುಮಟಾದಲ್ಲಿ ಗುರುವಾರ ಒಂದೇ ದಿನ ಮೂರು ಕಡೆ ಅಗ್ನಿ ಅನಾಹುತ ನಡೆದಿದೆ.
ಪುರಸಭೆ ವ್ಯಾಪ್ತಿಯ ವನ್ನಳ್ಳಿಯ ಹನೀಫಾ ಫಕೀರ ಲಂಗಾಡೋ ಅವರ ಮನೆಯ ಬಳಿಯಿದ್ದ ದಾಸ್ತಾನು ಕೊಠಡಿಗೆ ಬೆಂಕಿ ಬಿದ್ದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಕಾರಣದಿಂದ ಅಲ್ಲಿ ಅವಘಡ ಉಂಟಾಗಿದೆ. ಅಲ್ಲಿದ್ದ ಮೂರು ದೋಣಿಯ ಯಂತ್ರ, ವಾಷಿಂಗ್ ಮಿಷನ್, ಸೋಲಾರ್ ಪ್ಯಾನಲ್ ಸುಟ್ಟು ಕರಲಾಗಿದೆ. ಇದರಿಂದ ಹನೀಫಾ ಅವರು 7 ಲಕ್ಷ ರೂ ನಷ್ಟ ಅನುಭವಿಸಿದ್ದಾರೆ.
ಗೋಕರ್ಣ ಬಳಿಯ ಬೆಲೆಹಿತ್ತಲಿನ ಈಶ್ವರ ನಾಗಪ್ಪ ಅಂಬಿಗ ಅವರ ಮನೆಯ ಆವರಣದಲ್ಲಿ ಇಟ್ಟಿದ್ದ ಮೀನುಗಾರಿಕೆಯ ಬಲೆಗೂ ಇದೇ ದಿನ ಬೆಂಕಿ ತಗಲಿದೆ. ಅದರಿಂದ ಅವರು ಸಹ 70 ಸಾವಿರ ರೂ ನಷ್ಟ ಅನುಭವಿಸಿದ್ದಾರೆ. ಈ ಅಗ್ನಿ ಅನಾಹುತಕ್ಕೆ ಕಾರಣ ಗೊತ್ತಾಗಿಲ್ಲ. ಗುರುವಾರ ಮಧ್ಯಾಹ್ನದ ವೇಳೆಗೆ ಮೂರೂರು ಗುಡ್ಡದ ಮೇಲೆ ಸುಮಾರು 30 ಎಕರೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಈ ಪ್ರದೇಶದಲ್ಲಿ ಬೆಳೆದಿದ್ದ ಕರಡ ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದಿದೆ. ಈ ಎಲ್ಲಾ ಕಡೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಸಾಹಸ ನಡೆಸಿದ್ದಾರೆ. ಗುಡ್ಡದ ಮೇಲೆ ಬಿದ್ದ ಬೆಂಕಿ ಆರಿಸಲು ಅರಣ್ಯ ಸಿಬ್ಬಂದಿಯೂ ಪ್ರಯತ್ನಿಸಿದ್ದಾರೆ.