ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿಯವರು ಕಾಳಿ ನದಿ ನಡಿಗೆ ಶುರು ಮಾಡಿದ್ದಾರೆ. ಶನಿವಾರ ಈ ನಡಿಗೆ ಎರಡನೇ ದಿನ ಪೂರೈಸಿದೆ.
ನೀರಾವರಿ ಉದ್ದೇಶಕ್ಕಾಗಿ ಕಾಳಿ ನದಿಗೆ ಯೋಜನೆ ರೂಪಿಸಲಾಗಿದ್ದು, ಅದರ ಜಾರಿಗೆ ಆಗುತ್ತಿರುವ ವಿಳಂಬ ವಿರೋಧಿಸಿ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಈ ದಿನ ಪ್ರದಾನಟ್ಟಿ, ಹೊಸುರ, ತತ್ವಣಗಿ, ಅಮ್ಮನಕೊಪ್ಪ, ಜೋಗನಕೊಪ್ಪ, ಎನ್.ಎಸ್.ಕೊಪ್ಪ, ಗೋಲೆಹಳ್ಳಿ, ಮುಂಡವಾಡ ಗ್ರಾಮಗಳಲ್ಲಿ ಪಾದಯಾತ್ರೆ ನಡೆದಿದೆ.
ರಾತ್ರಿ ವೇಳೆ ಮುರ್ಕವಾಡದಲ್ಲಿ ಬಹಿರಂಗ ಸಭೆ ನಡೆದಿದ್ದು, ಅಲ್ಲಿಯೇ ಪಾದಯಾತ್ರೆ ಮಾಡಿದವರು ವಾಸ್ತವ್ಯ ಹೂಡಿದ್ದಾರೆ. ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಅವರು `ಯೋಜನೆಗೆ ಸ್ಪಷ್ಟ ಗಡುವು ಪ್ರಕಟಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ. `ನೀರಾವರಿ ಸೌಲಭ್ಯ ಸಿಗುವವರೆಗೆ ಹೋರಾಟ ಹಿಂತೆಗೆದುಕೊಳ್ಳುವುದಿಲ್ಲ’ ಎಂದವರು ಎಚ್ಚರಿಸಿದ್ದಾರೆ.
ಪಾದಯಾತ್ರೆಗೆ ಮೊದಲ ದಿನ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದರೆ, ಎರಡನೇ ದಿನ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದೆ. ಈ ದಿನ ಗಲ್ಲಿ ಗಲ್ಲಿಗಳಿಂದ ನೂರಾರು ಜನ ಭಾಗವಹಿಸಿ ಪಾದಯಾತ್ರೆ ಯಶಸ್ವಿ ಮಾಡಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ,ಬೀದರ ಜಿಲ್ಲೆಯ ರಾಜ್ಯ ರೈತ ಸಂಘಟನೆಯ ಕಾರ್ಯದರ್ಶಿ ಮಹೇಶ ಸುಭೇದಾರ, ವಿಜಯ ಭರತ್, ಸಾತುರಿ ಗೋಡಿಮನಿ, ರಾಮದಾಸ್ ಬೆಳಗಾಂಕರ, ನಕುಲ ಕೆಂಚನವರ ಅವರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.