ಶಿರಸಿ ಮಾರಿಕಾಂಬಾ ದೇವಿ ದರ್ಶನಕ್ಕೆ ನಿತ್ಯ ಲಕ್ಷಾಂತರ ಜನ ಬರುತ್ತಿದ್ದು, ಹಸಿದ ಭಕ್ತರ ಹೊಟ್ಟೆ ತುಂಬಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಅತ್ಯಂತ ಶುಚಿ ಹಾಗೂ ಋಚಿಯಾಗಿ ಇಲ್ಲಿ ಊಟ ಬಡಿಸಲಾಗುತ್ತಿದೆ.
ಶಿರಸಿಯ ಮಾರಿಗುಡಿ ಶಾಲಾ ಆವರಣದಲ್ಲಿ ಪ್ರತಿ ಜಾತ್ರೆಯಂತೆ ಈ ಜಾತ್ರೆಯಲ್ಲಿಯೂ ಭÀಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೇರೆ ಬೇರೆ ಊರುಗಳಿಂದ ಜಾತ್ರೆಗೆ ಬರುವ ಜನ ದೇವಿ ದರ್ಶನಪಡೆದು ಪ್ರಸಾದ ಭೋಜನ ಸ್ವೀಕರಿಸುತ್ತಿದ್ದಾರೆ. ಅಡಿಕೆ ಹಾಳೆಯಿಂದ ಸಿದ್ಧಪಡಿಸಿದ ತಾಟುಗಳನ್ನು ಊಟಕ್ಕೆ ಬಳಸಲಾಗುತ್ತಿದೆ. ನಿತ್ಯವೂ ಅನ್ನ ಸಾಂಬಾರ್ ಜೊತೆ ಪಾಯಿಸ, ಪಲ್ಯ, ಉಪ್ಪಿನಕಾಯಿಯನ್ನು ಭಕ್ತರಿಗೆ ಉಣಬಡಿಸಲಾಗುತ್ತಿದೆ.
ಅಡುಗೆ ಕೆಲಸಕ್ಕಾಗಿ 30ಕ್ಕೂ ಅಧಿಕ ಬಾಣಸಿಗರು ನಿತ್ಯವೂ ಶ್ರಮಿಸುತ್ತಿದ್ದಾರೆ. 15ಕ್ಕೂ ಅಧಿಕ ಜನ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಊಟ ಬಡಿಸುವಿಕೆ, ಊಟಕ್ಕೆ ಕುಳಿತವರಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ನಿತ್ಯ 60ಕ್ಕೂ ಅಧಿಕ ಸ್ವಯಂ ಸೇವಕರು ಬರುತ್ತಿದ್ದಾರೆ. ಮಂಜುನಾಥ ಭಟ್ಟರು ಅಡುಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಪ್ರಶಾಂತ ರೇವಣಕರ್ ಅವರು ಊಟದ ವಿತರಣೆಯ ಜವಾಬ್ದಾರಿವಹಿಸಿಕೊಂಡಿದ್ದಾರೆ.
ಇಲ್ಲಿ ಬರುವ ಭಕ್ತರಿಗೆ 6 ಪ್ರತ್ಯೇಕ ಕೌಂಟರ್ಗಳಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಶೋಭಾಯಾತ್ರೆಯ ದಿನ 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಅದಾದ ನಂತರವೂ ನಿತ್ಯ 12-13 ಸಾವಿರ ಜನ ಅನ್ನದಾನದಲ್ಲಿ ಭಾಗಿಯಾಗುತ್ತಿದ್ದಾರೆ. ಭಕ್ತರ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಊಟ ಸಿದ್ಧಪಡಿಸಲಾಗುತ್ತಿದೆ.