ಅಂಕೋಲಾದ ಅಕ್ಷರಾ ಪಾಲಿಕ್ಲಿನಿಕ್’ನಲ್ಲಿ ಅರ್ಹತೆ ಇಲ್ಲದಿದ್ದವರು ಸಹ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ವೈದ್ಯರಲ್ಲದವರು ರೋಗಿಗಳ ತಪಾಸಣೆ ಮಾಡುತ್ತಿದ್ದು, ಫಾರ್ಮಾಸ್ಟಿಸ್ಟ್ ಓದದವರು ಸಹ ಇಲ್ಲಿ ರೋಗಿಗಳಿಗೆ ಔಷಧಿ ನೀಡುವ ದೂರುಗಳಿವೆ
ಅಂಕೋಲಾದಲ್ಲಿ ಸೋನಿಯಾ ನಾಗೇಶ ಗಾಂವಕರ್ ಎಂಬಾತರು ಕೆಲ ವರ್ಷಗಳಿಂದ ಅಕ್ಷರಾ ಪಾಲಿಕ್ಲಿನಿಕ್ ಎಂಬ ಮಳಿಗೆ ನಡೆಸುತ್ತಿದ್ದಾರೆ. ಅವರೇ ಅಲ್ಲಿ ಔಷಧಿ ಅಂಗಡಿಯನ್ನು ನಡೆಸುತ್ತಾರೆ. ಆದರೆ, ಸೋನಿಯಾ ಗಾಂವಕರ್ ಅವರು ವೈದ್ಯರಲ್ಲ. ಔಷಧಿ ವಿತರಿಸಲು ಅವರು ಫಾರ್ಮಾಸ್ಟಿಸ್ಟ್ ಸಹ ಅಲ್ಲ ಎಂಬ ದೂರು ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಹ ವೈದ್ಯಕೀಯ ಹಿನ್ನಲೆ ಹೊಂದಿದವರಲ್ಲಎಂಬ ಆಕ್ಷೇಪದ ಹಿನ್ನಲೆ ಆರೋಗ್ಯಾಧಿಕಾರಿಗಳು ಕ್ರಮ ಜರುಗಿಸಿದ್ದಾರೆ.
ಅಕ್ಷರಾ ಪಾಲಿಕ್ಲಿನಿಕ್’ಗೆ ಪ್ರತಿ ದಿನ ಒಬ್ಬರಂತೆ 7ಕ್ಕೂ ಅಧಿಕ ಜನ ವೈದ್ಯರ ಹೆಸರಿನಲ್ಲಿ ಭೇಟಿ ನೀಡುತ್ತಾರೆ. ಅವರನ್ನು ಭೇಟಿಯಾಗಲು ನೂರಾರು ರೋಗಿಗಳು ಬರುತ್ತಾರೆ. ಆದರೆ, ಅಲ್ಲಿ ಭೇಟಿ ನೀಡುವ ವೈದ್ಯರು ಯಾರು? ಅವರ ಅರ್ಹತೆ ಏನು? ಅವರು ಶಿಫಾರಸ್ಸು ಮಾಡುವ ಔಷಧಿಗಳು ಯಾವವು? ರೋಗಿಗಳು ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ? ಎಂಬ ವಿಷಯದ ಬಗ್ಗೆ ಯಾರೂ ದಾಖಲಾತಿ ನಿರ್ವಹಿಸುತ್ತಿಲ್ಲ. ಸರ್ಕಾರ ಸೂಚಿಸಿದ ಪ್ರಕಾರ ಸಾಂಕ್ರಾಮಿಕ ರೋಗಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವ ಕೆಲಸ ಸಹ ಇಲ್ಲಿ ನಡೆಯುತ್ತಿಲ್ಲ.
ಸಾಂಕ್ರಾಮಿಕ ರೋಗಗಳನ್ನು ಹೊಂದಿದ ಯಾವುದೇ ರೋಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆ ಬಗ್ಗೆ ಮಾಹಿತಿ ನೀಡಬೇಕು ಎಂಬುದು ಸರ್ಕಾರದ ನಿಯಮ. ಆದರೆ, ಅಕ್ಷರಾ ಪಾಲಿಕ್ಲಿನಿಕ್ ಈ ನಿಯಮ ಪಾಲಿಸುತ್ತಿಲ್ಲ. ಇಲ್ಲಿ ಭೇಟಿ ನೀಡಿದ ರೋಗಿಗಳು ರೋಗ ವಾಸಿಯಾಗದ ಕಾರಣ ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗುತ್ತಿದ್ದು, ರೋಗ ಉಲ್ಬಣವಾದ ನಂತರ ರೋಗಿಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಿಗುತ್ತಿದೆ. ಮಂಗಳೂರು ಸೇರಿ ವಿವಿಧ ಕಡೆ ವಿಚಾರಣೆ ನಡೆಸಿದಾಗ ಆ ರೋಗಿ ಮೊದಲು ಅಕ್ಷರಾ ಪಾಲಿಕ್ಲಿನಿಕ್’ನಲ್ಲಿ ಚಿಕಿತ್ಸೆಪಡೆದ ವಿಷಯ ಗೊತ್ತಾಗುತ್ತಿದೆ. ಆದರೆ, ಅಷ್ಟರೊಳಗೆ ರೋಗಿ ಇನ್ನಷ್ಟು ಹೈರಣಾಗಿದ್ದು ಅವರನ್ನು ಉಳಿಸಿಕೊಳ್ಳುವುದೇ ಸರ್ಕಾರಕ್ಕೆ ಸವಾಲಾಗುತ್ತಿದೆ.
ಈಚೆಗೆ ಅಂಕೋಲಾದಲ್ಲಿನ ಬ್ರೂಣಗತ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳು ಕಳವಳವ್ಯಕ್ತಪಡಿಸಿದ್ದರು. ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧಿ ನೀಡದಂತೆ ಸೂಚನೆ ನೀಡಿದ್ದರು. ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೂ ಆದೇಶಿಸಿದ್ದರು. ಈ ಹಿನ್ನಲೆ ಅಕ್ಷರಾ ಪಾಲಿಕ್ಲಿನಿಕ್’ಗೆ ಸಹ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದರು.. ಸಾಕಷ್ಟು ತಿಳುವಳಿಕೆ ನೀಡಿದ ನಂತರವೂ ಸೋನಿಯಾ ನಾಗೇಶ ಗಾಂವಕರ್ ಅವರು ತಿದ್ದುಕೊಂಡಿಲ್ಲ. ಅಗತ್ಯ ದಾಖಲಾತಿಗಳನ್ನು ಸರ್ಕಾರಕ್ಕೆ ಒಪ್ಪಿಸಲಿಲ್ಲ. ರಾಜಕೀಯ ಪ್ರಭಾವ ಬಳಸಿ ತಮ್ಮ ಮಳಿಗೆಯನ್ನು ಮುಂದುವರೆಸಿದ್ದು, ಅದಾದ ನಂತರವೂ ಅಧಿಕಾರಿಗಳು ದಾಳಿ ನಡೆಸಿ ಕ್ರಮಕ್ಕೆ ಮುಂದಾದರೂ ಅಕ್ಷರಾ ಪಾಲಿಕ್ಲಿನಿಕ್’ನವರು ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ.
ಸಣ್ಣ ಸಣ್ಣ ಸಾಂಕ್ರಾಮಿಕ ರೋಗಗಳಿಗೂ ಸರಿಯಾದ ಪರೀಕ್ಷೆ ನಡೆಸದೇ ದೊಡ್ಡ ದೊಡ್ಡ ಔಷಧಿ ನೀಡುವುದು, ರೋಗಿಗಳನ್ನು ಅನಗತ್ಯವಾಗಿ ಕಾಡಿಸಿ ದುಡ್ಡು ವಸೂಲಿ ಮಾಡುವ ಆರೋಪವೂ ಇಲ್ಲಿ ಕೇಳಿ ಬಂದಿದೆ. ಈ ಎಲ್ಲಾ ಹಿನ್ನಲೆ ಸದ್ಯ ಸರ್ಕಾರ ಅಕ್ಷರಾ ಪಾಲಿಕ್ಲಿನಿಕ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಲ್ಲಿನ ಲೋಪಗಳನ್ನು ಪತ್ತೆ ಮಾಡಿ ನೋಟಿಸ್ ನೀಡಿದೆ. ಅನುಮತಿ ಇಲ್ಲದೇ ಔಷಧಿ ವಿತರಣೆ, ಸಾಂಕ್ರಾಮಿಕ ರೋಗಿಗಳ ಬಗ್ಗೆ ಮಾಹಿತಿ ನೀಡದಿರುವಿಕೆ, ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ ಕಾರಣ ಅಕ್ಷರಾ ಪಾಲಿಕ್ಲಿನಿಕ್’ಗೆ ಬೀಗ ಜಡಿಯಲು ನಿರ್ಧರಿಸಿದೆ. ಈ ಹಿನ್ನಲೆ ಅಂಕೋಲಾ ತಾಲೂಕು ವೈದ್ಯಾಧಿಕಾರಿಗಳು ಅಕ್ಷರಾ ಪಾಲಿಕ್ಲಿನಿಕ್’ಗೆ ನೋಟಿಸ್ ನೀಡಿದ್ದು, ಎಲ್ಲಾ ನಿಯಮ ಪಾಲನೆಗೆ ಸೂಚಿಸಿದ್ದಾರೆ. ನಿಯಮಗಳನ್ನು ಪಾಲಿಸದ ಕಾರಣ ಬಾಗಿಲು ಮುಚ್ಚುವಂತೆ ಸೂಚಿಸಿದ್ದಾರೆ.