21 ವರ್ಷದ ಕಾನೂನು ಹೋರಾಟದ ನಂತರ ನಾಲ್ವರು ಸಿದ್ದಾಪುರದ ಮಹಿಳೆಯರು ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲುಪಡೆದಿದ್ದಾರೆ. ಈಚೆಗೆ ಶಿರಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಮೂಲಕ ಹೆಣ್ಣು ಮಕ್ಕಳಿಗೂ ಭೂಮಿಯ ಹಕ್ಕು ಸಿಕ್ಕಿದೆ.
2001ರಲ್ಲಿ ಗಣಪತಿ ಎಂಬಾತರು ಸಾವನಪ್ಪಿದ್ದರು. ಅವರಿಗೆ ನಾಲ್ವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಲು ಗಂಡು ಮಕ್ಕಳು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಹೀಗಾಗಿ ಹಿರಿಯ ಮಗ ದೇವರು ಅವರ ಮೂಲಕ ಈ ಪ್ರಕರಣ 2005ರಲ್ಲಿ ಈ ಆಸ್ತಿ ವಿಭಜನೆಯ ಕಲಹ ನ್ಯಾಯಾಲಯದ ಮೆಟ್ಟಿಲೇರಿತು. `ಹೆಣ್ಣು ಮಕ್ಕಳ ಮದುವೆ ವೇಳೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಆ ವೇಳೆ ಕುಟುಂಬದ ಆಸ್ತಿಯನ್ನು ಕರಗಸಿ ಸಾಕಷ್ಟು ಖರ್ಚು ಮಾಡಲಾಗಿದೆ’ ಎಂದು ಗಂಡು ಮಕ್ಕಳು ವಾದಿಸಿದ್ದರು. ವಾದ-ಪ್ರತಿವಾದ ಉಚ್ಚ ನ್ಯಾಯಾಲಯದವರೆಗೂ ಹೋಗಿದ್ದು, ಅಲ್ಲಿಯೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿರಲಿಲ್ಲ.
ಈ ಎಲ್ಲದರ ನಡುವೆ ಮಾರ್ಚ 14ರಂದು ಶಿರಸಿ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಯಿತು. ವಾಜ್ಯದ ಕಾರಣ ಜಮೀನು ಹಾಳು ಬಿಡುವ ಬದಲು ಅವರವರಿಗೆ ಅದರ ಹಕ್ಕು ನೀಡುವಂತೆ ಕಕ್ಷಿದಾರರಿಗೆ ವಕೀಲರು ಮನವರಿಕೆ ಮಾಡಿದರು. `ಹಣ, ಸಮಯ ಹಾಗೂ ಶ್ರಮ ಉಳಿತಾಯಕ್ಕೆ ಲೋಕ ಅದಾಲತ್ ನೆರವಾಗಲಿದೆ’ ಎಂದು ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಅವರು ಕಿವಿಮಾತು ಹೇಳಿದರು. ಈ ಹಿನ್ನಲೆ ಭೂಮಿ ವಿಷಯವಾಗಿ 25 ವರ್ಷದಿಂದ ವೈರತ್ವ ಕಟ್ಟಿಕೊಂಡಿದ್ದವರು ರಾಜಿ ನಿರ್ಣಯದಿಂದ ಒಂದಾದರು. ಗಂಡು ಮಕ್ಕಳು ತಮ್ಮ ಸಹೋದರಿಯರಿಗೆ ಸಮಾನ ಹಕ್ಕು ನೀಡಲು ಒಪ್ಪಿದರು. ನ್ಯಾಯವಾದಿ ಜಿಪಿಎನ್ ಹೆಗಡೆ ಅವರು ಕಕ್ಷಿದಾರರ ಜೊತೆ ಮಾತನಾಡಿದ್ದು, ಹಿಂದೂ ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದ ಹೆಣ್ಣು ಮಕ್ಕಳಿಗೆ ಭೂಮಿ ಹಕ್ಕು ಕೊಡಿಸಿದರು.