ಗಾಳ ಹಾಕಿ ಮೀನು ಹಿಡಿಯಲು ಕುಮಟಾಗೆ ಹೋಗಿದ್ದ ಹೊನ್ನಾವರದ ಜಟ್ಟಿ ಮುಕ್ರಿ ಅವರು ಅದೇ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ಸಂಜೆ ವೇಳೆ ಮೀನು ಹಿಡಿಯುತ್ತಿದ್ದ ಅವರು ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಹೊನ್ನಾವರದ ಹಳದಿಪುರ ಅಗ್ರಹಾರ ಬಳಿಯ ಗಜನಿಗುಡಿ ಬಳಿ ಜಟ್ಟಿ ನಾರಾಯಣ ಮುಕ್ರಿ ಅವರು ವಾಸವಾಗಿದ್ದರು. 35 ವರ್ಷದ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಜಟ್ಟಿ ಮುಕ್ರಿ ಅವರು ಕುಡಿತದ ಚಟವನ್ನು ಹೊಂದಿದ್ದು, ಆಗಾಗ ಮೀನುಗಾರಿಕೆಗೆ ಹೋಗುತ್ತಿದ್ದರು. ಗಾಳ ಹಾಕಿ ಮೀನು ಹಿಡಿದು ಮೀನನ್ನು ಮನೆಗೆ ತರುತ್ತಿದ್ದರು.
ಮಾರ್ಚ 15ರಂದು ಸಂಜೆ 7.30ಕ್ಕೆ ಅವರು ಕುಮಟಾಗೆ ಹೋಗಿದ್ದರು. ಆ ದಿನ ಸಂಜೆ ಕುಮಟಾದ ಬಡಗಣಿ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಶುರು ಮಾಡಿದ್ದರು. ಈ ವೇಳೆ ಆಯತಪ್ಪಿ ಹೊಳೆಗೆ ಬಿದ್ದ ಅವರು ಮೇಲೆ ಬರಲಿಲ್ಲ. ನೀರಿನಲ್ಲಿ ಮುಳುಗಿದ ಪರಿಣಾಮ ಉಸಿರುಗಟ್ಟಿ ಅಲ್ಲಿಯೇ ಸಾವನಪ್ಪಿದರು. ಮರುದಿನ ಬೆಳಗ್ಗೆ 10.30ರ ವೇಳೆಗೆ ಜಟ್ಟಿ ಮುಕ್ರಿ ಅವರ ಶವ ಹೊಳೆ ಬದಿ ಕಾಣಿಸಿತು. ಸಹೋದರನ ಸಾವಿನ ಬಗ್ಗೆ ಮಂಜುನಾಥ ನಾರಾಯಣ ಮುಕ್ರಿ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.