ಒಳ್ಳೆಯ ಉದ್ಯೋಗ, ಕೈ ತುಂಬ ಸಂಬಳ, ಐಷಾರಾಮಿ ಜೀವನ ಸಾಗಿಸಲು ಸಕಲ ವ್ಯವಸ್ಥೆಯಿದ್ದರೂ ಅಂಕೋಲಾ ರಜತ ನಾಯಕ ಅವರು ಅಡ್ಡದಾರಿ ಹಿಡಿದಿದ್ದಾರೆ. ಮೋಜು-ಮಸ್ತಿ ವಿಷಯವಾಗಿ ವ್ಯಸನದ ಹಾದಿ ಹಿಡಿದ ಅವರು ಮಾದಕ ವಸ್ತುಗಳ ವ್ಯಾಮೋಹಕ್ಕೆ ಒಳಗಾಗಿದ್ದಾರೆ.
24 ವರ್ಷದ ರಜತ ಮಂಜುನಾಥ ನಾಯಕ ಅವರು ಅಂಕೋಲಾದ ವಂದಿಗೆಯಲ್ಲಿ ವಾಸವಾಗಿದ್ದಾರೆ. ಕಷ್ಟಪಟ್ಟು ಓದಿರುವ ಅವರು ಇಂಜಿನಿಯರ್ ಆಗಿದ್ದಾರೆ. ತಮಗಿರುವ ಉದ್ಯೋಗ, ಪ್ರತಿಭೆ ಬಳಸಿಕೊಂಡು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡುವ ಅವಕಾಶವಿದ್ದರೂ ಅವರ ಚಂಚಲ ಮನಸ್ಸು ಅಭಿವೃದ್ಧಿಗೆ ಅಡ್ಡಗಾಲಾಗಿದೆ. ಉನ್ನತ ಸಾಧನೆ ಮಾಡಲು ಅವರಿಗಿರುವ ದುಶ್ಚಟವೇ ಅಡ್ಡಿಯಾಗಿದೆ. ಮಾದಕ ವ್ಯಸನ ಸೇವಿಸಿ ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ರಜತ ನಾಯಕ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದು ಸಮಸ್ಯೆಗೆ ಸಿಲುಕಿದ್ದಾರೆ.
ಅಂಕೋಲಾದ ಹುಲಿದೇವರವಾಡದ ಬಳಿ ಮಾರ್ಚ 21ರಂದು ರಜತ ನಾಯಕ ಅವರು ಅಲೆದಾಡುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಆ ದಿನ ಮಧ್ಯಾಹ್ನದ ಬಿಸಿಲಿನಲ್ಲಿ ಮೈಮೇಲಿನ ಪ್ರಜ್ಞೆ ಕಳೆದುಕೊಂಡು ನಶೆಯಲ್ಲಿದ್ದ ರಜತ ನಾಯಕ ಅವರು ಅಲ್ಲಿನ ಎಪಿಎಂಸಿ ಮೈದಾನದ ಬಳಿ ಪೊಲೀಸರಿಗೆ ಕಾಣಿಸಿದ್ದಾರೆ. ರಜತ ನಾಯಕ ಅವರ ಬಾಯಿಂದ ಘಾಟು ವಾಸನೆ ಬರುತ್ತಿರುವುದನ್ನು ಪಿಸೈ ಗುರುನಾಥ ಹಾದಿಮನಿ ಅವರು ಗಮನಿಸಿದ್ದಾರೆ. ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ರಜತ ನಾಯಕ ಅವರು ಒಪ್ಪಿಕೊಂಡಿದ್ದಾರೆ.
ಮಾತನಾಡುವ ಸ್ಥಿತಿಯಲ್ಲಿರದ ರಜತ ನಾಯಕ ಅವರನ್ನು ಪೊಲೀಸರೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಂಕೋಲಾ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿಯೂ ರಜತ ನಾಯಕ ಅವರು ಗಾಂಜಾ ಸೇವಿಸಿದ್ದು, ದೃಢವಾಗಿದೆ. ನಿಷೇಧಿತ ವಸ್ತು ಸೇವನೆ ಮಾಡಿದ ಕಾರಣ ಪೊಲೀಸರು ರಜತ ನಾಯಕ ಅವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.
`ಮಾದಕ ವ್ಯಸನ ಜೀವನಕ್ಕೆ ಮಾರಕ’