ಭಟ್ಕಳದಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕಿಗೆ ಬೆಂಕಿ ಬಿದ್ದಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ತಹಸೀನ್ ಭಾನು ಅವರ ಒಡೆತನದ ಬೈಕಿಗೆ ಯಾಸೀನ್ ಖಾನ್ ಅವರು ಬೆಂಕಿ ಹಚ್ಚಿದ ಸಂಶಯ ಶುರುವಾಗಿದೆ.
ಭಟ್ಕಳದ ಜಾಲಿ ಗ್ರಾಮದ ಶೇಡಕುಳಿ ಹೊಂಡಾದಲ್ಲಿ ತಹಸೀನ್ ಭಾನು ಮೆಹಬೂಬಲಿ ಶೇಖ್ ಅವರು ವಾಸವಾಗಿದ್ದಾರೆ. ಗೃಹಿಣಿಯಾಗಿರುವ ಅವರು ಕೆಎ 31 ಇಎಫ್ 6532 ನೋಂದಣಿಯ ಬಜಾಜ್ ಪಲ್ಸರ್ ಬೈಕ್ ಹೊಂದಿದ್ದು, ಮಾರ್ಚ 19ರ ನಸುಕಿನಲ್ಲಿ ಆ ಬೈಕ್ ಬೆಂಕಿಗೆ ಆಹುತಿಯಾಗಿದೆ. ನಸುಕಿನ 1.30ಕ್ಕೆ ಅವರು ಬೈಕ್ ಹೊತ್ತಿ ಉರಿಯುವುದನ್ನು ನೋಡಿದ್ದಾರೆ. ಆದರೆ, ಬೆಂಕಿ ಆರಿಸಲು ಅವರಿಂದ ಸಾಧ್ಯವಾಗಿಲ್ಲ.
ಮನೆ ಹೊರಗಿನ ಅಂಗಳದಲ್ಲಿದ್ದ ಬೈಕ್ ಏಕಾಏಕಿ ಹೊತ್ತಿ ಉರಿಯುವ ಸಾಧ್ಯತೆಗಳಿರಲಿಲ್ಲ. ಯಾವುದೇ ಅಪಾಯಕಾರಿ ಸ್ಥಳದಲ್ಲಿಯೂ ಬೈಕನ್ನು ಅವರು ನಿಲ್ಲಿಸಿರಲಿಲ್ಲ. ಅದಾಗಿಯೂ, ಅಂದಾಜು 70 ಸಾವಿರ ರೂ ಮೌಲ್ಯದ ಬೈಕ್ ಸುಟ್ಟು ಕರಕಲಾದ ಬಗ್ಗೆ ಚಿಂತಿಸಿದಾಗ ಅವರಿಗೆ ಭಟ್ಕಳದ ಯಾಸೀನ್ ನಾಜೀರ್ ಖಾನ್ ಮೇಲೆ ಅನುಮಾನ ಶುರುವಾಗಿದೆ. ಹೀಗಾಗಿ ತಹಸೀನ್ ಭಾನು ಅವರು ಯಾಸೀನ್ ಖಾನ್ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.