ಮುಂಡಗೋಡಿನ ಜನಾರ್ಧನ ಆಚಾರಿ ಹಾಗೂ ಚೌಡಪ್ಪ ಗೌಡರ್ ಅವರ ನಡುವೆ ಜಗಳ ನಡೆದಿದ್ದು, ಊರಿನವರು ಆ ಜಗಳ ಬಿಡಿಸಿದ್ದಾರೆ. ಅದಾದ ನಂತರ ಚೌಡಪ್ಪ ಗೌಡರ್ ಅವರು ಜನಾರ್ಧನ ಆಚಾರಿ ಅವರ ಮನೆಗೆ ನುಗ್ಗಿ ಜನಾರ್ಧನ ಆಚಾರಿ ಅವರ ತಲೆ ಒಡೆದಿದ್ದಾರೆ.
ಮುಂಡಗೋಡದ ಮಳಗಿ ಬಳಿಯ ಧರ್ಮಾ ಕಾಲೋನಿಯಲ್ಲಿ ಜನಾರ್ಧನ ವಾಸು ಆಚಾರಿ ಅವರು ವಾಸವಾಗಿದ್ದಾರೆ. ಆಚಾರಿ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಜನಾರ್ಧನ ಆಚಾರಿ ಅವರು ಮಾದೇವ ಜಾಡರ್ ಎಂಬಾತರಿಗೆ 1 ಸಾವಿರ ರೂ ನೀಡಿದ್ದರು. ಆದರೆ, ಮಾದೇವ ಜಾಡರ್ ಅವರು ಆ ಹಣವನ್ನು ಮರಳಿಸಲಿಲ್ಲ. ಈ ಬಗ್ಗೆ ಆಗಾಗ ಜನಾರ್ಧನ ಆಚಾರಿ ಅವರು ಪ್ರಶ್ನಿಸುತ್ತಿದ್ದು, ಮಾದೇವ್ ಜಾಡರ್ ಅವರು ಅದನ್ನು ಮರಳಿಸುವ ಭರವಸೆ ನೀಡಿದ್ದರು.
ಹೀಗಿರುವಾಗ, ಮೊನ್ನೆ ಜನಾರ್ಧನ ಆಚಾರಿ ಅವರು ಮಳಗಿ-ಬನವಾಸಿ ರಸ್ತೆಯ ಧರ್ಮಾ ಕಾಲೋನಿಯಲ್ಲಿ ಸಂಚರಿಸುತ್ತಿದ್ದರು. ಮಾದೇವ ಜಾಡರ್ ಅವರ ಚಿಕ್ಕಪ್ಪನ ಮಗ ಚೌಡಪ್ಪ ಗೌಡಪ್ಪ ಜಾಡರ್ ಅವರು ಅಲ್ಲಿ ಎದುರಾದರು. ಈ ವೇಳೆ ಜನಾರ್ಧನ ಆಚಾರಿ ಅವರಿಗೆ ಮೂರು ವರ್ಷದ ಹಿಂದೆ ಮಾದೇವ ಜಾಡರ್ ಅವರಿಗೆ 1 ಸಾವಿರ ರೂ ನೀಡಿದ್ದು ನೆನಪಾಯಿತು. `ಮಾದೇವ್ ಜಾಡರ್ ಹಣ ಮರಳಿಸಿಲ್ಲ’ ಎಂಬ ವಿಷಯವನ್ನು ಜನಾರ್ಧನ ಆಚಾರಿ ಅವರು ಚೌಡಪ್ಪ ಜಾಡರ್ ಅವರ ಬಳಿ ಹೇಳಿದರು. `ಆತನಿಗೆ ಹಣ ಕೊಟ್ಟು ನನ್ನ ಬಳಿ ಏಕೆ ಕೇಳುವೆ?’ ಎಂದು ಚೌಡಪ್ಪ ಜಾಡರ್ ಅವರು ಪ್ರಶ್ನಿಸಿದರು. ಈ ವಿಷಯವಾಗಿ ಜನಾರ್ಧನ ಆಚಾರಿ ಹಾಗೂ ಚೌಡಪ್ಪ ಜಾಡರ್ ಅವರ ನಡುವೆ ಅಲ್ಲಿ ಜಗಳ ಶುರುವಾಯಿತು.
ಊರಿನ ಜನ ಆ ಜಗಳವನ್ನು ಅಲ್ಲಿಗೆ ಬಿಡಿಸಿದರು. ಆದರೆ, ಚೌಡಪ್ಪ ಜಾಡರ್ ಅವರು ಇದರಿಂದ ಸಿಟ್ಟಾದರು. ಜನಾರ್ಧನ ಆಚಾರಿ ಅವರು ಮಧ್ಯಾಹ್ನ ಮನೆಯಲ್ಲಿ ಮಲಗಿದಾಗ ಅವರ ಮನೆಗೆ ನುಗ್ಗಿದ ಚೌಡಪ್ಪ ಜಾಡರ್ ಅವರು ರಂಪಾಟ ಮಾಡಿದರು. ಮನೆಯ ಬಾಗಿಲು ಮುರಿದ ಚೌಡಪ್ಪ ಜಾಡರ್ ಅವರು ಅಲ್ಲಿದ್ದ ಕಬ್ಬಿಣದ ಹಿಡಿಕೆಯ ಹಂಚಿನಿAದ ಜನಾರ್ಧನ ಆಚಾರಿ ಅವರ ತಲೆಗೆ ಹೊಡೆದರು. ಜನಾರ್ಧನ ಆಚಾರಿ ಅವರು ಬೊಬ್ಬೆ ಹೊಡೆಯುತ್ತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚೌಡಪ್ಪ ಜಾಡರ್ ಅವರ ಜೊತೆಗಿದ್ದ ಮತ್ತೊಬ್ಬರು ಪಾತ್ರೆಯಿಂದ ತಲೆಗೆ ಬಡಿದರು. ಪರಿಣಾಮ ಜನಾರ್ಧನ ಆಚಾರಿ ಅವರ ತಲೆಗೆ ನೋವಾಯಿತು. ತಲೆ ಹಿಂದಿನಿoದ ರಕ್ತ ಸುರಿಯಿತು. ಜನಾರ್ಧನ ಆಚಾರಿ ಅವರು ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಳ್ಳುತ್ತಿದ್ದು, ಅಲ್ಲಿಂದಲೇ ಪೊಲೀಸ್ ದೂರು ನೀಡಿದರು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದರು.