ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಶಿರಸಿ ಜಾತ್ರೆ ತಿರುಗಾಟ ಮಾಡಿದ್ದ ಸರ್ಕಾರಿ ಅಧಿಕಾರಿಯೊಬ್ಬರು ತಮಗಾದ ದಣಿವು ಸಹಿಸಲಾಗದೇ ಸಾವನಪ್ಪಿದ್ದಾರೆ. ಅನೇಕ ತಾಸುಗಳ ಕಾಲ ವಿಶ್ರಾಂತಿಪಡೆದ ಅವರು ನಂತರ ಶೌಚಾಲಯಕ್ಕೆ ತೆರಳಿ ಅಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಶಿರಸಿ ಅಯ್ಯಪ್ಪ ನಗರದ ಚೌಡೇಶ್ವರಿ ಕಾಲೋನಿಯಲ್ಲಿ ವಿರುಪಾಕ್ಷ ಶಿವಯೋಗಿ ಕಟಗಿ (47) ಅವರು ವಾಸವಾಗಿದ್ದರು. ಜಿಲ್ಲಾ ಔಷಧ ಉಗ್ರಾಣದ ಪ್ರಭಾರದಾರಕರಾಗಿ ಅವರು ಸರ್ಕಾರಿ ಸೇವೆಯಲ್ಲಿದ್ದರು. ಜಿಲ್ಲಾ ಫಾರ್ಮಸಿ ಅಧಿಕಾರಿಯಾಗಿದ್ದ ಅವರು ಫೆ 27ರ ಮಧ್ಯಾಹ್ನದ ಅವಧಿಯಲ್ಲಿ ಶಿರಸಿ ಜಾತ್ರೆ ಪೇಟೆ ಸಂಚಾರ ನಡೆಸಿದ್ದರು. ಅದರಿಂದ ತೀವೃವಾಗಿ ಆಯಾಸಗೊಂಡ ಅವರು ಫೆ 28ರ ನಸುಕಿನ 3 ಗಂಟೆಗೆ ಮನೆಗೆ ಆಗಮಿಸಿ ವಿಶ್ರಾಂತಿಪಡೆದಿದ್ದರು.
ಈ ವೇಳೆ ಅವರ ವಿರುಪಾಕ್ಷ ಕಟಗಿ ಅವರ ಪತ್ನಿ ಸವಿತಾ ಕಟಗಿ ಅವರು ತಮ್ಮ ಹಳೆಯ ಮನೆಯಾದ ಉಣ್ಣೆಮಠದ ಬಳಿ ಇದ್ದರು. ಪತಿಗೆ ಅವರು ಫೋನ್ ಮಾಡಿದ್ದು, `ಜಾತ್ರೆ ತಿರುಗಾಟದಿಂದ ಆಯಾಸವಾಗಿದೆ. ಅಯ್ಯಪ್ಪ ನಗರದಲ್ಲಿರುವ ಹೊಸ ಮನೆಯಲ್ಲಿ ಮಲಗಿದ್ದು, ತಿಂಡಿ ತಿನ್ನಲು ಉಣ್ಣೆಮಠದಲ್ಲಿರುವ ಮನೆಗೆ ಬರುವೆ’ ಎಂದು ಹೇಳಿದ್ದರು. ಅದಾದ ನಂತರ ಬೆಳಗ್ಗೆ 8 ಗಂಟೆಗೆ ಸವಿತಾ ಕಟಗಿ ಅವರು ಮತ್ತೆ ಫೋನ್ ಮಾಡಿದರು. ಆಗಲೂ `ಇನ್ನೂ ಮಲಗಿದ್ದೇನೆ. ಆಮೇಲೆ ಬರುತ್ತೇನೆ’ ಎಂದು ವಿರುಪಾಕ್ಷ ಕಟಗಿ ಅವರು ಹೇಳಿದ್ದರು. ಆದರೆ, ಮಧ್ಯಾಹ್ನ ಆದರೂ ಅವರು ಮನೆಗೆ ಮರಳಲಿಲ್ಲ.
ಮಧ್ಯಾಹ್ನ 12 ಗಂಟೆ ಅವಧಿಗೆ ಸವಿತಾ ಕಟಗಿ ಅವರು ತಮ್ಮ ಹೊಸ ಮನೆಯ ಬಳಿ ಹೋದರು. ಸಾಕಷ್ಟು ಬಾರಿ ಕರೆದರೂ ವಿರುಪಾಕ್ಷ ಕಟಕಿ ಅವರು ಬಾಗಿಲು ತೆರೆಯಲಿಲ್ಲ. ಫೋನ್ ಸಹ ಸ್ವೀಕರಿಸಲಿಲ್ಲ. ಹೀಗಾಗಿ ಅವರು ಇನ್ನೂ ಮಲಗಿರಬಹುದು ಎಂದು ಭಾವಿಸಿ ಸವಿತಾ ಕಟಗಿ ಅವರು ಮನೆಗೆ ಮರಳಿದರು. 1.30ರ ವೇಳೆಗೆ ತಮ್ಮ ಮೈದುನನ ಜೊತೆ ಮತ್ತೆ ಹೊಸ ಮನೆಗೆ ಹೋದರು. ಆಗ, ಬಾಗಿಲು ಮುರಿದು ಒಳಗೆ ಪ್ರವೇಶಿಸಿದರು. ಅಲ್ಲಿ ಎಲ್ಲಿಯೂ ವಿರುಪಾಕ್ಷ ಕಟಗಿ ಅವರು ಕಾಣಲಿಲ್ಲ. ಫೋನ್ ಮಾಡಿದಾಗ ಶೌಚಾಲಯದ ಒಳಗೆ ರಿಂಗ್ ಆಗಿದ್ದು, ಕೇಳಿಸಿತು. ಶೌಚಾಲಯದ ಬಾಗಿಲು ಒಡೆದು ನೋಡಿದಾಗ ಅಲ್ಲಿ ವಿರುಪಾಕ್ಷ ಕಟಗಿ ಅವರು ಬಿದ್ದಿದ್ದರು.
ವಿರುಪಾಕ್ಷ ಕಟಗಿ ಅವರನ್ನು ಮಾತನಾಡಿಸುವ ಪ್ರಯತ್ನ ನಡೆಯಿತು. ಆದರೆ, ಅವರು ಮಾತನಾಡಲಿಲ್ಲ. ಆಂಬುಲೆನ್ಸಿನ ಮೂಲಕ ಅವರನ್ನು ಆಸ್ಪತ್ರೆಗೆ ಕರೆತಂದಾಗ ಈಗಾಗಲೇ ಅವರು ಸಾವನಪ್ಪಿರುವುದು ಗೊತ್ತಾಯಿತು. ಈ ಸಾವಿನ ಬಗ್ಗೆ ಸವಿತಾ ಕಟಗಿ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಶವ ಬಿಟ್ಟುಕೊಟ್ಟರು.