ಹೊನ್ನಾವರದಲ್ಲಿ ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿದ ದುರುಳರು ಅರಣ್ಯ ಇಲಾಖೆ ನೌಕರರೊಬ್ಬರನ್ನು ಬುಟ್ಟಿಗೆ ಹಾಕಿಕೊಂಡು ಅಧಿಕಾರಿಗಳ ಸೀಲ್ ಹಾಗೂ ಸಹಿ ನಕಲು ಮಾಡಿದ್ದಾರೆ. ವಿವಿಧ ದಾಖಲೆಗಳ ಮೇಲೆ ಅಧಿಕಾರಿಗಳ ಸಹಿ ಹಾಗೂ ಸೀಲ್ ಹಾಕಿಸಿ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಿದ್ದಾರೆ.
ಅರಣ್ಯ ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳ ಸಹಿ ಪೋರ್ಜರಿ ಮಾಡಿದ ತಂಡವನ್ನು ಹೊನ್ನಾವರ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಅವರು ಪತ್ತೆ ಮಾಡಿದ್ದಾರೆ. ಸರ್ಕಾರಿ ಸಿಬ್ಬಂದಿಯೂ ಸೇರಿ 13 ಜನ ಈ ಅಪರಾತಪರದಲ್ಲಿ ಭಾಗಿಯಾಗಿದ್ದು, ಅವರೆಲ್ಲರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಬೆಳ್ಕೆಯ ಗಸ್ತು ಅರಣ್ಯ ರಕ್ಷಕ ಮಹಾಬಲ ಗೌಡ, ಮಾದೇವಿ ಗೌಡ ಮರಬಳ್ಳಿ ಹೊನ್ನಾವರ, ಕನ್ನೆ ಗೌಡ ಮರಬಳ್ಳಿ, ರಾಮಚಂದ್ರ ಗಣಪ ನಾಯ್ಕ ಮರಬಳ್ಳಿ, ಆಸಿಸ್ ಅಲ್ಮೆಡಾ ಕೆರವಳ್ಳಿ, ನಾರಾಯಣ ಗೌಡ ಕೆರವಳ್ಳಿ, ಮಂಜು ಗೌಡ ಕಾನಗೋಡು, ಹನಮಿ ಗೌಡ ಮರಬಳ್ಳಿ, ರಾಜು ತಿಪ್ಪಯ್ಯ ನಾಯ್ಕ ಚಿಕ್ಕನಕೋಡ, ಶಿವಾನಿ ಬುಕ್ಸ್ಟಾಲ್ (ಶಿವಾನಿ ಟ್ರೇಡ್ ಕಾರ್ಪೋರೇಷನ್) ಹೊನ್ನಾವರ, ನಾಗೇಶ ನಾಯ್ಕ ಮಂಕಿ ಲಕೋಟಿ ಕೇರಿ, ಸಮಾಜ ಕಲ್ಯಾಣ ಇಲಾಖೆಯ ಭಾಸ್ಕರ ಗೊಂಡ ಹಾಗೂ ಮಾಸ್ತಿ ಗೊಂಡ ಅವರು ಸರ್ಕಾರಿ ಭೂಮಿಯನ್ನು ಸ್ವಂತದಾಗಿಸಿಕೊಳ್ಳುವ ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.
ಹೊನ್ನಾವರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಅರಣ್ಯ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಾಬಲ ಗೌಡ ಅವರು ಸಂಚು ರೂಪಿಸಿದ್ದಾರೆ. ಅದರ ಪ್ರಕಾರ ಅರಣ್ಯ ಭೂಮಿಯ ನಕಲಿ ಜಿಪಿಎಸ್ ತೆಗೆದು ಅರಣ್ಯಾಧಿಕಾರಿ ಹೊನ್ನಾವರ ಇವರ ಕನ್ನಡ ಹಾಗೂ ಇಂಗ್ಲಿಷ್ ಸೀಲ್ ಹಾಗೂ ಉಪವಲಯ ಅರಣ್ಯಾಧಿಕಾರಿ ಹಡಿನಬಾಳ ಅವರ ಹಾಗೂ ಉಪವಲಯ ಅರಣ್ಯಾಧಿಕಾರಿ ಹಿರೇಬೈಲ್ ಅವರ ಕನ್ನಡ ಸೀಲ್ ತಯಾರಿಸಿದ್ದಾರೆ. ಅದರ ಮೂಲಕ ಸುಳ್ಳು ದಾಖಲೆ ಸೃಷ್ಟಿಮಾಡಿದ್ದಾರೆ. ಅದಕ್ಕೆ ನಕಲಿ ಸಹಿ ಮತ್ತು ಸೀಲ್ ಹಾಕಿ ನಕಲಿ ದಾಖಲಾತಿಯನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಹಳೆಯ ಕಡತಕ್ಕೆ ಸೇರಿಸಿ ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಕಬಳಿಸುವ ಪ್ರಯತ್ನ ನಡೆಸಿದ್ದಾರೆ. ಈ ಎಲ್ಲಾ ದಾಖಲೆ ಪತ್ತೆ ಮಾಡಿದ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಅವರು 13 ಜನರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.