ಆಂಧ್ರಪ್ರದೇಶದ ಪುಟಪರ್ತಿ ಪ್ರಶಾಂತ ನಿಲಯಯಿಂದ ಹೊರಟ `ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆ’ ಉತ್ತರ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಕುಮಟಾದ ಛತ್ರಕೂರ್ವೆ ಗ್ರಾಮದಲ್ಲಿ ರಥ ತಂಗಿದ್ದು, ಸುತ್ತಲಿನ ಭಕ್ತರು ಶ್ರದ್ಧಾಭಕ್ತಿಯಿಂದ ರಥಕ್ಕೆ ನಮಸ್ಕರಿಸಿದ್ದಾರೆ.
ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ `ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆ’ ದೇಶದ ಎಲ್ಲಡೆ ಸಂಚರಿಸಲಿದೆ. ಈ ರಥ ಧರ್ಮಸ್ಥಳ ಮಾರ್ಗವಾಗಿ ಹೊನ್ನಾವರದ ಮೂಲಕ ಕುಮಟಾ ಮೂಲಕ ಮುಂದಿನ ಊರಿಗೆ ಸಾಗಿದೆ. ಇಲ್ಲಿನ ಸಂತೆಗದ್ದೆಯಿAದ ಆರಂಭವಾದ ರಥಯಾತ್ರೆ ನಾಗೂರು ಕ್ರಾಸಿನ ಮೂಲಕ ಸಾಗಿತು. ಭಕ್ತರು ಘೋಷಣೆಗಳೊಂದಿಗೆ ರಥವನ್ನು ಸ್ವಾಗತಿಸಿದರು. ಛತ್ರಕೂರ್ವೆಯ ಸತ್ಯಸಾಯಿ ಸೇವಾ ಸಮಿತಿಯವರು ನಾಗೂರು ಕ್ರಾಸಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ರಥವನ್ನು ಬರಮಾಡಿಕೊಂಡರು. ಹೂಮಾಲೆ ಅರ್ಪಿಸಿ, ಮಂಗಳ ವಾದ್ಯಗಳನ್ನು ಮೊಳಗಿಸಿ ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ ಎಲ್ಲಡೆ `ಸಾಯಿ ರಾಮ್’ ಎಂಬ ಘೋಷಣೆಗಳು ಕೇಳಿಸಿದವು.
ಕುಮಟಾದ ಮಿರ್ಜಾನದಲ್ಲಿ ರಥದ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಸೇರಿದ್ದು, ಭಕ್ತಿಯಿಂದ ಪೂಜೆ ಸಲ್ಲಿಸಿದರು. ನಂತರ ನಡೆದ ಪ್ರಸಾದ ವಿತರಣೆಯಲ್ಲಿ ಭಕ್ತರು ಭಾಗಿಯಾದರು. ಕೋಟೆ ಕ್ರಾಸಿನ ಮೂಲಕ ನಡೆದ ಮೆರವಣಿಗೆಯಲ್ಲಿ ಜನ ಉತ್ಸಾಹದಿಂದ ಭಾಗವಹಿಸಿದ್ದರು. ಅದಾದ ನಂತರ ರಥಯಾತ್ರೆ ಛತ್ರಕೂರ್ವೆಗೆ ತೆರಳಿತು. ಛತ್ರಕೂರ್ವೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳದಲ್ಲಿ ಭಕ್ತರು ಭಾಗವಹಿಸಿದ್ದರು. ರುದ್ರ ಪಠಣ, ಭಜನೆ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ಆಧ್ಯಾತ್ಮಿಕ ಚೈತನ್ಯ ಮೂಡಿಸಿದವು. ಅನ್ನ ಪ್ರಸಾದ ವ್ಯವಸ್ಥೆ ಸಮರ್ಪಕವಾಗಿ ಮಾಡಲಾಗಿದ್ದು, ಪ್ರಸಾದ ಭೋಜನ ಸವಿದ ಭಕ್ತರು ಧನ್ಯತಾ ಭಾವವ್ಯಕ್ತಪಡಿಸಿದರು. ಈ ವೇಳೆ ಮಕ್ಕಳಿಂದ ನಡೆದ ಛದ್ಮ ವೇಷ ಕಾರ್ಯಕ್ರಮ ಗಮನಸೆಳೆಯಿತು.
ಇನ್ನೂ ನಾಗೂರು ಕ್ರಾಸಿನಿಂದ ರಾಮನರ ಕ್ರಾಸಿನವರೆಗೆ ನಡೆದ ಬೈಕ್ ರ್ಯಾಲಿ ಆಕರ್ಷಿಸಿತು. ಅತ್ಯಂತ ಶಿಸ್ತಿನಿಂದ ಭಕ್ತರು ರಥಯಾತ್ರೆಯಲ್ಲಿ ಸಾಗಿದರು. ಮಾರ್ಚ 19ರ ಕಾರ್ಯಕ್ರಮ ಮುಗಿಸಿದ ನಂತರ ಮಾರ್ಚ್ 20ರಂದು ಬೆಳಗ್ಗೆ 8 ಗಂಟೆಗೆ ರಥಯಾತ್ರೆ ಸಿದ್ದಾಪುರದ ಕಡೆಗೆ ಮುಂದುವರಿಯಿತು. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ಚಲಿಸಲಿರುವ ಈ ರಥ ನಂತರ ಅಂಕೋಲಾಗೆ ಬರಲಿದೆ.