ಯಲ್ಲಾಪುರ ಟಿಎಂಎಸ್ ಆಡಳಿತಾಧಿಕಾರಿ ವಿರುದ್ಧ `ಟಿಎಂಎಸ್ ಉಳಿಸಿ’ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಟಿಎಂಎಸ್ ಆಡಳಿತಾಧಿಕಾರಿಗಳ ನಡವಳಿಕೆಯನ್ನು ಪ್ರತಿಭಟನಾಕಾರರು ವಿರೋಧಿಸಿದ್ದು, ಅವರನ್ನು ವಜಾ ಮಾಡಬೇಕು ಎಂದು ಪಟ್ಟುಹಿಡಿದಿದ್ದಾರೆ.
`ಈಗಿನ ಟಿಎಂಎಸ್ ಆಡಳಿತಾಧಿಕಾರಿ ಮಾಡಿದ ಎಲ್ಲಾ ಠರಾವುಗಳು ರದ್ಧಾಗಬೇಕು. ಹೊಸ ಆಡಳಿತಾಧಿಕಾರಿ ನೇಮಕಾತಿ ನಡೆಯಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. `ಉನ್ನತ ಅಧಿಕಾರಿಗಳಿಂದ ಸ್ಪಷ್ಟ ಭರವಸೆ ಸಿಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ’ ಎಂದು ಧರಣಿನಿರತರು ಹೇಳಿದ್ದಾರೆ.
ಪ್ರತಿಭಟನಾಕಾರರ ಮನವಿ ಆಲಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ ಅವರು ಸ್ಥಳಕ್ಕೆ ಬಂದಿದ್ದು, ಸಹಕಾರಿ ದುರೀಣರು ಅವರನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. `ನೀವು ನಮ್ಮ ಬೇಡಿಕೆ ಈಡೇರಿಸುವುದಾದರೆ ಮಾತ್ರ ಮಾತನಾಡಿ. ಇಲ್ಲವಾದರೆ ಮಾತನಾಡುವುದೇ ಬೇಡ’ ಎಂದು ಪ್ರತಿಭಟನಾಕಾರರು ತಾಕೀತು ಮಾಡಿದ್ದಾರೆ. `ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ’ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದು, ಇದರಿಂದ ಅಧಿಕಾರಿಗಳೇ ತಬ್ಬಿಬ್ಬಾಗಿದ್ದಾರೆ.
`ಪ್ರತಿಭಟನೆಯ ಭಾಗವಾಗಿ ಗುರುವಾರ ರಸ್ತೆ ತಡೆ ನಡೆಸುತ್ತೇವೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದು ಈ ವೇಳೆ ಟಿಎಂಎಸ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ದೃಢವಾಗಿ ಘೋಷಿಸಿದ್ದಾರೆ. `ಗುರುವಾರ ಸಂಜೆಯ ಒಳಗೆ ಆಡಳಿತಾಧಿಕಾರಿ ವಜಾ ಆಗದೇ ಇದ್ದರೆ ಶುಕ್ರವಾರದಿಂದ ಏಕಾಂಗಿಯಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ’ ಎಂದು ಅವರು ಘೋಷಣೆ ಮಾಡಿದ್ದಾರೆ. `ನಾರಾಯಣ ಭಟ್ಟರ ನಿಲುವಿಗೆ ನಾವು ಬದ್ಧ’ ಎಂದು ವೆಂಕಟ್ರಮಣ ಬೆಳ್ಳಿ ಅವರು ಹೇಳಿದ್ದಾರೆ.
`ರೈತರ ಹಿತ ಗಮನದಲ್ಲಿರಿಸಿ ಹೋರಾಟ ಶುರು ಮಾಡಿದ್ದೇವೆ. ಸಂಸ್ಥೆ ಕಟ್ಟಿ 27 ವರ್ಷದ ನಂತರ ಬೈಲಾ ತಿದ್ದುಪಡಿ ಅಗತ್ಯವೇ ಇಲ್ಲ’ ಎಂದು ಹರಿಪ್ರಕಾಶ ಕೋಣೆಮನೆ ಅವರು ಹೇಳಿದ್ದಾರೆ. ಪ್ರಸಾದ ಹೆಗಡೆ, ಸುಬ್ಬಣ್ಣ ಬೋಳ್ಮನೆ, ವೆಂಕಟ್ರಮಣ ಕಿರುಕುಂಬತ್ತಿ. ಪ್ರಮೋದ ಹೆಗಡೆ, ಗಣಪತಿ ಮಾನಿಗದ್ದೆ, ನಾಗರಾಜ ಕವಡಿಕೆರೆ ಇತರರು ಧರಣಿಯಲ್ಲಿ ಭಾಗವಹಿಸಿದ್ದಾರೆ.