ಪಂಪ್ಡ್ ಸ್ಟೋರೇಜ್ ಯೋಜನೆಯ ಶರಾವತಿ ಉಳಿಸಿ ಹೋರಾಟ ಸಮಿತಿಯೂ ಮಾರ್ಚ 10ರಂದು ಬೃಹತ್ ಪ್ರತಿಭಟನಾ ಜನ ಸಮಾವೇಶ ನಡೆಸಲು ನಿರ್ಧರಿಸಿದೆ. ಆ ದಿನ ಬೆಳಗ್ಗೆ 10 ಗಂಟೆಗೆ ಹೊನ್ನಾವರ ಪಟ್ಟಣದ ಅಂಥೋನಿ ಪ್ರೌಢಶಾಲಾ ಮೈದಾನದಲ್ಲಿ ಉಗ್ರ ಹೋರಾಟ ನಡೆಯಲಿದೆ.
ಈ ಬಗ್ಗೆ ಶರಾವತಿ ಉಳಿಸಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಮಾಹಿತಿ ನೀಡಿದ್ದಾರೆ. ಮೂಡಗಣಪತಿ ದೇವಸ್ಥಾನದ ಸಭಾಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೋರಾಟದ ರೂಪುರೇಷೆಗಳ ಕುರಿತು ವಿವರಿಸಿದ್ದಾರೆ. `ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಸಮಾವೇಶದ ನೇತೃತ್ವವಹಿಸಲಿದ್ದು, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ, ಚಿತ್ತಾಪುರದ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಬಂಗಾರಮಕ್ಕಿ ಕ್ಷೇತ್ರದ ಧರ್ಮದರ್ಶಿ ಮಾರುತಿ ಗುರೂಜಿ ಸಮಾವೇಶದ ಸಾನ್ನಿಧ್ಯವಹಿಸಲಿದ್ದಾರೆ’ ಎಂದವರು ಹೇಳಿದರು.
`ಹೋರಾಟ ಸಮಿತಿಯ ಭಾಗವಾಗಿರುವ ಶಾಸಕ ದಿನಕರ ಶೆಟ್ಟಿ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಸಚಿವ ಆರ್ ಎನ್ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಜೆ ಡಿ.ನಾಯ್ಕ ಜೊತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರುಗಳನ್ನು ಆಹ್ವಾನಿಸಲಾಗುತ್ತದೆ. ವಿಜ್ಞಾನಿಗಳ ಜೊತೆ ವಿವಿಧ ಸಂಘಟನೆಯವರು ಸಹ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ’ ಎಂದವರು ತಿಳಿಸಿದರು.
`ವಿಜ್ಞಾನಿಗಳಾದ ಟಿ ವಿ ರಾಮಚಂದ್ರನ್ ಮತ್ತು ಸುಭಾಷಚಂದ್ರನ್ ಈ ಯೋಜನೆಯ ಅಪಾಯದ ಬಗ್ಗೆ ಈಗಾಗಲೇ ಎಚ್ಚರಿಸಿದ್ದಾರೆ. ಬೇಸಿಗೆಯಲ್ಲಿ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಈಗಾಗಲೇ ಕೊರತೆ ಇದ್ದು,ಸಮುದ್ರದ ಉಪ್ಪುನೀರು ಅಳ್ಳಂಕಿಯವರೆಗೆ ನದಿ ಸೇರುವ ಬಗ್ಗೆ ವಿವರಿಸಿದ್ದಾರೆ. ಇದರಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಪರಿಸರ ಹಾನಿ, ವನ್ಯಜೀವಿ ನಾಶ, ಭೂ ಕುಸಿತದಂತಹ ಅಪಾಯಗಳಿಂದ ಇಲ್ಲಿಯ ಜನರನ್ನು ರಕ್ಷಿಸಲು ಯೋಜನೆಯ ವಿರುದ್ದ ಹೋರಾಡಬೇಕಾಗಿದೆ’ ಎಂದವರು ಕರೆ ನೀಡಿದರು. `ಈ ಬಗ್ಗೆ ಸಮಿತಿಯು ನಿರಂತರವಾಗಿ ಹೋರಾಟ ನಡೆಸುತ್ತಿದ್ದು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಮನವಿ ನೀಡಿದೆ. ಕೇಂದ್ರದ ತಜ್ಞರ ತಂಡಕ್ಕೂ ಅಹವಾಲನ್ನು ಸಲ್ಲಿಸಲಾಗಿದೆ’ ಎಂಬ ವಿಷಯ ತಿಳಿಸಿದರು.
ಸಮಿತಿಯ ಅಧ್ಯಕ್ಷ ಉದ್ಯಮಿ ವೆಂಕಟ್ರಮಣ ಹೆಗಡೆ ಕವಲಕ್ಕಿ ಅವರು ಮಾತನಾಡಿ `ಈ ಯೋಜನೆಯಿಂದ ಪ್ರವಾಸೋದ್ಯಮ ಹಾಗೂ ಮೀನುಗಾರರಿಕೆಗೆ ತೊಂದರೆಯಾಗಲಿದೆ. ಹೊನ್ನಾವರ ತಾಲೂಕಿನ ಜನಜೀವನದ ರಕ್ಷಣೆಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು. ಆ ದಿನ ಹೋರಾಟದಲ್ಲಿ ಪಾಲ್ಗೊಳ್ಳುವವರಿಗೆ ಸಮಿತಿಯಿಂದಲೇ ಊಟ ಕೊಡಲಾಗುತ್ತದೆ’ ಎಂದು ಘೋಷಿಸಿದರು. ಕೇಶವ ನಾಯ್ಕ ಬಳಕೂರು ಅವರು ಮಾತನಾಡಿ `ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಸಮುದ್ರದ ಉಪ್ಪು ನೀರು ನದಿಯಲ್ಲಿ ಹಿಮ್ಮುಖವಾಗಿ ಹರಿಯಲಿದ್ದು, ಇದರಿಂದ ಕೃಷಿ ನಾಶವಾಗಲಿದೆ. ಹೊನ್ನಾವರ, ಭಟ್ಕಳ, ಸಿದ್ದಾಪುರ ತಾಲೂಕುಗಳ ಕುಡಿಯುವ ನೀರು ಉಪ್ಪು ನೀರಾಗಲಿದೆ’ ಎಂಬ ಆತಂಕವ್ಯಕ್ತಪಡಿಸಿದರು.
ಶಿವರಾಜ ಮೇಸ್ತ ಅವರು ಮಾತನಾಡಿ `ಈಗಾಗಲೇ ಹೊನ್ನಾವರ ಭಾಗದಲ್ಲಿ ಬೇಸಿಗೆಯಲ್ಲಿ ನದಿಯಲ್ಲಿ ನಡೆದು ಹೋಗುವಷ್ಟು ಕೆಲವೊಂದು ಭಾಗಗಳಲ್ಲಿ ಶರಾವತಿಯಲ್ಲಿ ನೀರು ಕಡಿಮೆಯಾಗಿದೆ’ ಎಂದರು. ಟಿ ಟಿ ನಾಯ್ಕ ಮೂಡ್ಕಣಿ ಅವರು ಮಾತನಾಡಿ `ಗೇರುಸೊಪ್ಪಾ ಡ್ಯಾಂ ಆದನಂತರ ಶರಾವತಿ ನದಿಯಲ್ಲಿ ನೀರು ಬಹಳಷ್ಟು ಕಡಿಮೆಯಾಗಿದ್ದು, ಇದರಿಂದ ಜನಜೀವನದ ಮೇಲೆ ಭಾರಿ ದುಷ್ಪರಿಣಾಮ ಆಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ನಿಲ್ಲಬೇಕು’ ಎಂದರು.
ಜಿ ಪಂ ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಗ್ರಾಪಂ ಮಾಜಿ ಉಪಾಧ್ಯಕ್ಚ ಮಂಜುನಾಥ ನಾಯ್ಕ ಗೇರುಸೊಪ್ಪ, ಮಂಗಲದಾಸ ನಾಯ್ಕ, ರಾಜೇಶ ಭಂಡಾರಿ, ಎಂ ಎಸ್ ಹೆಗಡೆ ಕಣ್ಣಿಮನೆ, ಯೋಗೇಶ ಮೇಸ್ತ, ವಿಶ್ವನಾಥ ನಾಯಕ, ಅನಂತ ನಾಯ್ಕ ಹೆಗ್ಗಾರ, ವಿದ್ಯಾರ್ಥಿ ಒಕ್ಕೂಟದ ಕಾರ್ಥಿಕ್ ಗೌಡ, ದರ್ಶನ ನಾಯ್ಕ, ಸಂತ್ರಸ್ತ ಗಣೇಶ ಹೆಗಡೆ ಬೊಮ್ಮಾರ, ಸಮಿತಿಯ ಜಿ ಎನ್ ಗೌಡ, ವಿಘ್ನೇಶ್ವರ ಹೆಗಡೆ, ಮಹೇಶ ಮೇಸ್ತ , ರಾಜೇಶ ತಾಂಡೇಲ ಗುರುಪ್ರಿಯ ಶೆಟ್ಟಿ, ದೀಪಕ್ಕಿಂತ ನಾಯ್ಕ ಇತರರಿದ್ದರು.