ಶಿರಸಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಪೂಜನ್ ಭಂಡಾರಿ ಅವರು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಿದರೂ ಬದುಕಲಿಲ್ಲ. ಎರಡು ವಾರಗಳ ಕಾಲ ಆರೈಕೆ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪೂಜನ್ ಬಾಲಚಂದ್ರ ಭಂಡಾರಿ ಅವರು ಶಿರಸಿಯ ಗಾಂಧೀನಗರದಲ್ಲಿ ವಾಸವಾಗಿದ್ದರು. 30 ವರ್ಷದ ಅವರು ಮ್ಯಾಕಾನಿಕ್ ಆಗಿ ತಮ್ಮ ಜೀವನ ರೂಪಿಸಿಕೊಂಡಿದ್ದರು. 2026ರ ಮಾರ್ಚ 9ರಂದು ಅವರು ಮರಾಠಿಕೊಪ್ಪದ ಮ್ಯೆಕಾನಿಕ್ ಜಾನ್ಸನ್ ಮಾರ್ಷಲ್ ಡಿಸೋಜಾ ಅವರ ಜೊತೆ ಬೈಕಿನಲ್ಲಿ ಸಂಚಾರ ನಡೆಸಿದ್ದರು. ರಿಪೇರಿ ಮಾಡಿದ್ದ ಬೈಕಿನ ಟ್ರಯಲ್ ನೋಡಲು ಹೊರಟಾಗ ಅವರ ಬೈಕು ಸುಬ್ರಾಯ ನಾರಾಯಣ ಹೆಗಡೆ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು.
ಆ ದಿನ ಸಂಜೆ ವಿವೇಕಾನಂದ ನಗರದ ನಿವೃತ್ತ ನೌಕರ ಸುಬ್ರಾಯ ನಾರಾಯಣ ಹೆಗಡೆ ಅವರು ತಮ್ಮ ಮನೆಯಿಂದ ಟಿ ಎಸ್ ಎಸ್ ಸೂಪರ್ ಮಾರ್ಟಿಗೆ ಹೋಗಲು ನಿರ್ಧರಿಸಿದ್ದರು. ಹುಬ್ಬಳ್ಳಿ ರಸ್ತೆಯ ಭೂಮಾ ಪ್ರೌಢಶಾಲೆಯ ತಿರುವಿನಲ್ಲಿ ಅವರು ಸ್ಕೂಟಿ ನಿಲ್ಲಿಸಿದ್ದು, ಅಲ್ಲಿ ರಸ್ತೆ ದಾಟುವ ಪ್ರಯತ್ನ ಮಾಡಿದ್ದರು. ಈ ವೇಳೆ ಹುಬ್ಬಳ್ಳಿ ಕಡೆಯಿಂದ ಬೈಕ್ ಓಡಿಸಿಕೊಂಡು ಬಂದ ಪೂಜನ್ ಭಂಡಾರಿ ಅವರು ಸುಬ್ರಾಯ ಹೆಗಡೆ ಅವರ ಸ್ಕೂಟಿಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ಪೂಜನ್ ಭಂಡಾರಿ ಅವರ ಜೊತೆ ಜಾನ್ಸನ್ ಡಿಸೋಜಾ ಅವರು ಸಹ ಗಾಯಗೊಂಡಿದ್ದರು.
ಆ ಪೈಕಿ ಗಂಭೀರ ಗಾಯಗೊಂಡ ಪೂಜನ್ ಭಂಡಾರಿ ಅವರನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ವಾರಗಳ ಕಾಲ ಅವರ ಆರೈಕೆ ನಡೆಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಏಪ್ರಿಲ್ 5ರಂದು ಪೂಜನ್ ಭಂಡಾರಿ ಅವರು ಕೊನೆಯುಸಿರೆಳೆದರು.