85 ವರ್ಷದ ವೃದ್ಧರೊಬ್ಬರು ವಕೀಲರಿಲ್ಲದೇ ಹೈಕೋರ್ಟಿನಲ್ಲಿ ಕೇಸು ಗೆದ್ದಿದ್ದಾರೆ. ಜಿಲ್ಲಾ ನ್ಯಾಯಾಲಯದಿಂದ ಉಚ್ಛ ನ್ಯಾಯಾಲಯದವರೆಗೂ ಅವರು ವಕೀಲರನ್ನು ನೇಮಿಸದೇ ಸ್ವತಃ ವಾದ ಮಾಡಿದ್ದಾರೆ. ಕೇಸು ಗೆಲ್ಲುವ ಮೂಲಕ 2 ಲಕ್ಷ ರೂ ಮೋಸ ಮಾಡಲು ಯತ್ನಿಸಿದ ಉದ್ಯಮಿಗೆ ಸೋಲಿನ ರುಚಿ ತೋರಿಸಿದ್ದಾರೆ.
ಕಾರವಾರದ ಕೋಡಿಭಾಗದಲ್ಲಿ ಅಶೋಕ ದತ್ತಾತ್ರೇಯ ಜೋಶಿ ಅವರು ವಾಸವಾಗಿದ್ದಾರೆ. 85 ವರ್ಷದ ಅವರು ನಿವೃತ್ತ ಸೈನಿಕರಾಗಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅಶೋಕ ಜೋಶಿ ಅವರ ವಿರುದ್ಧ ಚೆಕ್ ಬೌನ್ಸ್ ಕೇಸು ದಾಖಲಾಗಿದ್ದು, ಆ ಪ್ರಕರಣದಲ್ಲಿ ಹೈಕೋರ್ಟ ಮೆಟ್ಟಿಲೇರಿದ ವ್ಯಕ್ತಿಗೆ ಅಶೋಕ ಜೋಶಿ ಅವರು ಸೋಲಿನ ರುಚಿ ತೋರಿಸಿದ್ದಾರೆ. ಹೈಕೋರ್ಟಿನವರೆಗೂ ವಕೀಲರಿಲ್ಲದೇ ಸಾಗಿದ ಅಶೋಕ ಜೋಶಿ ಅವರು ಸ್ವತಃ ವಾದ ಮಾಡಿ ತಮ್ಮೊಳಗಿನ ಕಾನೂನು ಜ್ಞಾನವನ್ನು ಪ್ರದರ್ಶಿಸಿದ್ದಾರೆ. 11 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ಅಶೋಕ ಜೋಶಿ ಅವರು ಕೊನೆಗೂ ಈ ಯುದ್ಧದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಗೋವಾದ ಪೊಂಡಾ ಮೂಲದ ಸುರಕ್ಷಾ ಇಂಡಿಯಾದ ಸಂಸ್ಥಾಪಕ ಸಂತೋಷ್ ಬಾಲಚಂದ್ರ ಕಾಮತ್ ಅವರು 2013ರಲ್ಲಿ ಅಶೋಕ ಜೋಶಿ ಅವರಿಂದ 2 ಲಕ್ಷ ರೂ ಕೈಗಡ ಸಾಲಪಡೆದಿದ್ದರು. ಈ ಹಣ ಮರಳಿಸಲು ಅವರು 2015ರಲ್ಲಿ 2 ಲಕ್ಷ ರೂಪಾಯಿಯ ಚೆಕ್ ನೀಡಿದ್ದರು. ಆದರೆ, ಆ ಚೆಕ್ ಬೌನ್ಸ್ ಆಗಿದ್ದು, ಹಣ ಮರು ಪಾವತಿ ಮಾಡದ ಕಾರಣ ಸಂತೋಷ ಕಾಮತ್ ಅವರ ವಿರುದ್ಧ ಅಶೋಕ ಜೋಶಿ ಅವರು ಪ್ರಕರಣ ದಾಖಲಿಸಿದ್ದರು. ಆ ವೇಳೆ ನ್ಯಾಯಾಲಯವು ಸಂತೋಷ ಕಾಮತ್ ಅವರನ್ನು ತಪ್ಪಿತಸ್ಥ ಎಂದು ಆದೇಶಿಸಿ, 3,63,800ರೂ ಪಾವತಿಗೆ ಆದೇಶಿಸಿತ್ತು. ಆದರೆ, ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಸಂತೋಷ್ ಕಾಮತ್ ಅವರು ಮೇಲ್ಮನವಿ ಸಲ್ಲಿಸಿದ್ದು, 2025ರಲ್ಲಿ ಆ ಮೇಲ್ಮನವಿಯೂ ವಜಾ ಆಯಿತು.
ಅದಾಗಿಯೂ, ಸಂತೋಷ್ ಕಾಮತ್ ಅವರು ಹಣ ಮರಳಿಸುವ ಬದಲು ಧಾರವಾಡದ ಹೈಕೋರ್ಟ ಮೊರೆ ಹೋದರು. ಅಲ್ಲಿ ಮೇಲ್ಮನವಿ ಸಲ್ಲಿಸಿದರು. ಜೂನ್ 5ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಅಲ್ಲಿಯೂ ಸಂತೋಷ್ ಕಾಮತ್ ಅವರ ಅರ್ಜಿ ವಜಾ ಮಾಡಿತು. ತಮಗೆ ಬರಬೇಕಿದ್ದ 2 ಲಕ್ಷ ರೂ ಹಣಕ್ಕಾಗಿ ಅಶೋಕ ಜೋಶಿ ಅವರು ಅಲ್ಲಿಯೂ ಸ್ವತಃ ವಾದ ಮಂಡಿಸಿದ್ದು, ಸಂತೋಷ್ ಕಾಮತ್ ಅವರಿಗೆ ಸೋಲಿನ ರುಚಿ ತೋರಿಸಿದರು. 85ರ ಇಳಿ ವಯಸ್ಸಿನಲ್ಲಿಯೂ ಅಶೋಕ ಜೋಶಿ ಅವರು 2 ಲಕ್ಷ ರೂಪಾಯಿಗಾಗಿ ಕಾನೂನು ಹೋರಾಟ ಮಾಡಿದ್ದು ವಿಶೇಷ. ಅದರಲ್ಲಿಯೂ, ಈ ವಯಸ್ಸಿನಲ್ಲಿಯೂ ವಕೀಲರನ್ನು ನೇಮಿಸದೇ ಸ್ವತಃ ವಾದ ಮಾಡಿ ಕೇಸು ಗೆದ್ದಿದ್ದು ಅಪರೂಪದಲ್ಲಿಯೇ ಅಪರೂಪ.