ರಾಜ್ಯದಲ್ಲಿ ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಅಧಿಕಾರ ವಿಕೇಂದ್ರಿಕರಣದ ಜನ ಪ್ರತಿನಿಧಿ ಆಡಳಿತ ವ್ಯವಸ್ಥೆ ಜನ ಸಾಮಾನ್ಯರ ಮಟ್ಟದಲ್ಲಿ ಸ್ತಬ್ಧವಾದಂತಾಗಿದೆ. ಸಕಾಲಕ್ಕೆ ಚುನಾವಣೆ ನಡೆಯದೆ ಸ್ಥಳೀಯ ಸಂಸ್ಥೆಗಳ ಅಧಿಕಾರಗಳು ಜಿಲ್ಲಾಡಳಿತ ಮತ್ತು ಶಾಸಕರ ಕಡೆ ಕೇಂದ್ರೀಕೃತವಾಗುತ್ತಿವೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಚುನಾವಣೆಯೇ ಇಲ್ಲದೆ ಆಡಳಿತಾಧಿಕಾರಿಗಳ ಮೂಲಕ ಒಂದು ಅವಧಿ (ಐದು ವರ್ಷ) ಮುಗಿಸಿವೆ.
ಈಗ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕೂಡ ಚುನಾವಣೆ ಇಲ್ಲದೆ ಅರ್ಧ ವರ್ಷ ದಾಟಿವೆ. ಶಾಸಕರ ಹೊರತಾಗಿ ಅಧಿಕಾರ ವಿಕೇಂದ್ರಿಕರಣದ ಭಾಗವಾಗಿ ಸೃಜನೆಯಾದ ಎಲ್ಲ ಜನಪ್ರತಿನಿಧಿ ಹುದ್ದೆಗಳು ಖಾಲಿ ಉಳಿದಿವೆ. ಮುಖ್ಯಮಂತ್ರಿ ಬದಲಾವಣೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲ, ಇದೇ ಅವಧಿಯಲ್ಲಿ ರಾಜ್ಯದಲ್ಲಿ ಎಸ್ ಐಆರ್ ಆರಂಭವಾಗಿದೆ. ಮತ್ತೊಂದೆಡೆ ಮುಂಗಾರು ದುರ್ಬಲದಿಂದ ಕೃಷಿ ವಲಯ ಸಮಸ್ಯೆಯಲ್ಲಿದೆ. ಬರಗಾಲ, ಬೆಳೆ ನಷ್ಟದ ಆತಂಕ ಆವರಿಸಿದೆ.
ಮಲೆನಾಡು ಕರಾವಳಿ ಭಾಗದ ಜಿಲ್ಲೆಗಳು ಸಂಭಾವ್ಯ ಪ್ರವಾಹ ಸ್ಥಿತಿ ಎದುರಿಸಬೇಕಿವೆ. ಸದ್ಯದ ಸ್ಥಿತಿಯಲ್ಲಿ ಎಲ್ಲ ಹೊಣೆಗಾರಿಕೆ ಅಧಿ ಕಾರಿ ವಲಯದಲ್ಲಿದೆ. ವಾಸ್ತವದಲ್ಲಿ ಅಲ್ಲಿಯೂ ಸಿಬ್ಬಂದಿ ಕೊರತೆ ಸಾಕಷ್ಟಿದೆ. ರಾಜ್ಯದಲ್ಲಿ ಅಪರೂಪಕ್ಕೆ ಇಂಥದ್ದೊಂದು ಸನ್ನಿವೇಶ ಎದುರಾಗಿದೆ. ಹಳ್ಳಿಗಳಲ್ಲಿ ಗ್ರಾಮ ಸಭೆಗಳು ನಡೆಯುತ್ತಿಲ್ಲ. ನಗರ ಪ್ರದೇಶದ ಸ್ಥಳೀಯ ಸಂಸ್ಥೆ ಗಳಲ್ಲಿ ವಾರ್ಡ್ಗಳ ಸಮಸ್ಯೆಯ ಚರ್ಚೆ ಗಳು ನಡೆಯುತ್ತಿಲ್ಲ. ಜನ ಸಮಸ್ಯೆ ಹೇಳಲು ಅಧಿಕಾರಿಗಳ ಬೆನ್ನು ಬೀಳುವ ಸ್ಥಿತಿ ಇದೆ.
ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಬಾಕಿ ಇರುವುದರಿಂದ ಸಚಿವ ಆಕಾಂಕ್ಷಿ ಶಾಸಕರ ದಂಡು ಬೆಂಗಳೂರು ಸೇರುತ್ತಿವೆ. ಬರ ನೆರೆ ಪರಿಸ್ಥಿತಿ ಕುರಿತು ಜನರ ಉತ್ತರದಾಯಿಗಾಗಿ ಆಡಳಿತ ವ್ಯವಸ್ಥೆ ದುಡಿಸುವ ಉಸ್ತುವಾರಿ ಸಚಿವರು ಕೂಡ ಇಲ್ಲ. ಒಂದೂವರೆ ತಿಂಗಳಲ್ಲಿ ಆಗಸ್ಟ್ 15 ಸ್ವಾತಂತ್ರ್ಯ ದಿನೋತ್ಸವ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಅಲ್ಲಿ ಧ್ವಜಾರೋಹಣ ನಡೆಸುತ್ತಿದ್ದರು. ರಾಜ್ಯದಲ್ಲಿ 5746 ಗ್ರಾಮ ಪಂಚಾಯಿತಿಗಳ ಅಧಿಕಾರ ಅವಧಿ ಕಳೆದ ಡಿಸೆಂಬರ್-ಜನವರಿ ತಿಂಗಳಂತರದ ಲ್ಲಿಯೇ ಮುಗಿದಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅವಧಿ ಕೂಡ 2025ರ ನವೆಂಬರ್ ವೇಳೆ ಮುಕ್ತಾಯ ಆಗಿವೆ. ಆರು ತಿಂಗಳು ಕಳೆದರೂ ಚುನಾವಣೆ ನಡೆಸದೇ ಇರುವುದಕ್ಕೆ ಆಕಾಂಕ್ಷಿಗಳು ಭಾರೀ ನಿರಾಸೆಯಲ್ಲಿದ್ದಾರೆ.