ಶಿರಸಿಯ ಶಿಂಗನಮನೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬoಧಿಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ವ್ಯಕ್ತಿಗಳಿಬ್ಬರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷ ಪ್ರಸನ್ನ ಶೆಟ್ಟಿ ಅವರು ಇದನ್ನು ಗಮನಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಶಿರಸಿ ಶಿಂಗನಮನೆಯ ಪರಮೇಶ್ವರ ನಾಯ್ಕ ಅವರ ಕೊಲೆಯಾಗಿದೆ. ಈ ಕುರಿತು ವಿವಿಧ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ. ಸಾವಿರಾರು ಜನ ವೀಕ್ಷಿಸುವ ಶಿರಸಿಯ ಮಾರಿಕಾಂಬಾ ಟಿವಿಯೂ ಈ ಕುರಿತು ವರದಿ ಪ್ರಸಾರ ಮಾಡಿದೆ. ಫೇಸ್ಬುಕ್’ನಲ್ಲಿ ಹರಿದಾಡಿದ ಮಾರಿಕಾಂಬಾ ಟಿವಿಯ ವರದಿ ಅಡಿ ಕಿಡಿಗೇಡಿಗಳು ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದಾರೆ.
ಚಿದಂಬರ ಗುನಗಾ ಎಂಬ ಪ್ರೋಪೈಲ್ ಹೊಂದಿದ ವ್ಯಕ್ತಿಯೊಬ್ಬರು ಭೀಮಣ್ಣ ನಾಯ್ಕ ಅವರ ಕುರಿತು ಕೆಟ್ಟ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಂತೋಷ ಡಿಸೋಜಾ ಎಂಬ ಪ್ರೊಪೈಲಿನವರು `ಭೀಮಣ್ಣ ನಾಯ್ಕ ಅವರ ಬಲದ ಮೇಲೆ ಇಂತಹುದು ನಡೆಯುತ್ತಿರುವುದು’ ಎಂಬ ಅರ್ಥದಲ್ಲಿ ಕಮೆಂಟ್ ಹಾಕಿದ್ದಾರೆ. `ಯಾರು ಯಾರನ್ನು ಕೊಲೆ ಮಾಡುತ್ತಾರೆ ಎಂದು ಭೀಮಣ್ಣ ನೋಡುತ್ತ ಕೂರಬೇಕ?’ ಎಂದು ಗೋಪಿ ನಾಯ್ಕ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. `ಉತ್ತರ ಕನ್ನಡ ಹಾಗೂ ಶಿರಸಿಯಲ್ಲಿ ಇಂಥವು ಹೆಚ್ಚಾಗಿದೆ’ ಎನ್ನುವುದರ ಬಗ್ಗೆಎ ವಿನೋತ ಕೋಟರ್ಕರ್ ಎಂಬ ಖಾತೆದಾರರು ಕಮೆಂಟ್ ಮಾಡಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಅವರು ಇದನ್ನು ಗಮನಿಸಿದ್ದು, ಶಾಸಕರ ವಿರುದ್ಧ ಅನಗತ್ಯ ಆರೋಪ ಮಾಡಿ, ಅವಹೇಳನ ಪದ ಬಳಕೆ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ. ತಕ್ಷಣ ಕಾನೂನು ಕ್ರಮಕ್ಕಾಗಿ ಅವರು ಪೊಲೀಸರಿಗೆ ದೂರಿದ್ದಾರೆ. `ಈ ಕಮೆಂಟ್ ನೋಡಿ ಶಾಸಕರ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಅನಾಹುತ ಆಗುವ ಮುನ್ನ ಕ್ರಮ ಜರುಗಿಸಿ’ ಎಂದು ಪ್ರಸನ್ನ ಶೆಟ್ಟಿ ಅವರು ಆಗ್ರಹಿಸಿದ್ದಾರೆ.