ಸಿದ್ದಾಪುರದ ಹೊಸಗದ್ದೆ ಬಳಸಿಯ ಹಸರಗೋಡದ ಶ್ರೀಧರ ಹೆಗಡೆ ಅವರ ಮನೆ ಅಂಗಳಕ್ಕೆ ಚಿರತೆ ನುಗ್ಗಿದೆ. ಅಲ್ಲಿದ್ದ ಆಕಳ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ಅರೆಬರೆ ತಿಂದ ಕರುವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಕಣ್ಣಿನ ಎದುರೇ ಎರಡು ತಿಂಗಳ ಕಂದಮ್ಮನನ್ನು ಕಳೆದುಕೊಂಡ ತಾಯಿ ಹಸು ದಿನವಿಡೀ ಮೌನದಿಂದಲೇ ಕಾಲ ಕಳೆದಿದೆ.
ಶ್ರೀಧರ ಪರಮೇಶ್ವರ ಹೆಗಡೆ ಅವರು ಗುರುವಾರ ಹಸುವಿನ ಕರುವನ್ನು ಮನೆಯ ಅಂಗಳದ ಕೊಟ್ಟಿಗೆಯ ಸಮೀಪ ಕಟ್ಟಿದ್ದರು. ಅದೇ ರಾತ್ರಿ ಹೊಂಚು ಹಾಕಿ ಬಂದ ಚಿರತೆ ಪುಟ್ಟ ಕರುವನ್ನು ಭಕ್ಷಿಸಿದ್ದು, ಮನೆ ಅಂಗಳ ಹಾಗೂ ಮೆಟ್ಟಿಲುಗಳನ್ನು ರಕ್ತಸಿಕ್ತವಾಗಿಸಿದೆ. ಕರುವಿನ ಹಿಂಭಾಗವನ್ನು ಭಕ್ಷಿಸಿ, ಸ್ಥಳದಲ್ಲೇ ಕರುಣಾಜನಕವಾಗಿ ಕೊಂದಿದೆ. ಬೆಳಗಿನ ಜಾವ ಮನೆಯವರು ಎದ್ದು ನೋಡಿದಾಗ ಕರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದ್ದು, ದೃಶ್ಯ ನೋಡಿ ಇಡೀ ಕುಟುಂಬದವರು ಅತ್ತಿದ್ದಾರೆ.
ಸಿದ್ದಾಪುರ ತಾಲೂಕಿನ ಎಲ್ಲಡೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಇದರಿಂದ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಕರು ಸಾವನಪ್ಪಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. `ಅರಣ್ಯ ಇಲಾಖೆಯ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರುತ್ತಿಲ್ಲ. ನಮಗೆ ಕೇವಲ ಕಾಟಾಚಾರದ ಪರಿಹಾರ ಧನ ಬೇಡ, ಈ ನಿರಂತರ ಪ್ರಾಣಭೀತಿಯಿಂದ ಶಾಶ್ವತ ಮುಕ್ತಿ ಬೇಕಾಗಿದೆ’ ಎಂದು ಜನ ಆಗ್ರಹಿಸಿದ್ದಾರೆ.