ದಾದಾಗಿರಿ ಮೂಲಕ ಜನರನ್ನು ಬೆದರಿಸುವ ರೌಡಿ ಹಾಗೂ ಅಕ್ರಮವಾಗಿ ಬಡ್ಡಿ ದಂಧೆ ನಡೆಸುವ ವ್ಯಕ್ತಿಗಳಿಬ್ಬರ ಮನೆ ಮೇಲೆ ಹಳಿಯಾಳ ಪೊಲೀಸರು ದಾಳಿ ಮಾಡಿದ್ದಾರೆ. ಇಲ್ಲಿನ ರಾಜೇಶ ವಾಲೇಕರ್ ಹಾಗೂ ಶಾಹಿಬ್ ಮುಲ್ಲಾ ಅವರ ಮನೆಯಲ್ಲಿ ಗಂಟೆಗಳ ಕಾಲ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಹಳಿಯಾಳದ ಚಹ್ವಾಣ ಪ್ಲಾಟಿನ ರಾಕೇಶ ದಿನಕರ ವಾಲೇಕರ್ ಅವರು ರೌಡಿ ಶೀಟರ್ ಆಗಿದ್ದಾರೆ. ಸದ್ಯ ಅವರು ಜೈಲಿನ ಹಿಂದೆ ಜಿ+2 ಮನೆಯಲ್ಲಿ ವಾಸವಾಗಿದ್ದಾರೆ. ಅವರ ವಿರುದ್ಧ ವಿವಿಧ ಪ್ರಕರಣಗಳಿದ್ದು, ಅವರ ಚಟುವಟಿಕೆ ಮೇಲೆ ಪೊಲೀಸರು ಕಣ್ಣಿರಿಸಿದ್ದಾರೆ. ಬಂಧನ-ಬಿಡುಗಡೆ-ಎಚ್ಚರಿಕೆ ನಂತರವೂ ಅವರ ವರ್ತನೆಯಲ್ಲಿ ಸುಧಾರಣೆ ಕಂಡಿಲ್ಲ. ಹೀಗಾಗಿ ಪೊಲೀಸರು ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಮೇದಾರಗಲ್ಲಿಯ ಶಾಹಿಬ್ ಮಹಮದ್ ಶರೀಪ್ ಮುಲ್ಲಾ ಅವರು ಸಹ ಅಕ್ರಮ ಚಟುವಟಿಕೆಗಳಿಂದ ಹಳಿಯಾಳದ ಜನರಿಗೆ ತಲೆನೋವಾಗಿದ್ದಾರೆ. ಅವರ ವಿರುದ್ಧವೂ ಪೊಲೀಸರು ಸಾಕಷ್ಟು ಕಠಿಣ ಕ್ರಮ ಜರುಗಿಸಿದ್ದಾರೆ. ಆದರೆ, ಶಾಹಿಬ್ ಮುಲ್ಲಾ ವರ್ತನೆಯಲ್ಲಿ ಸಹ ಯಾವುದೇ ಬದಲಾವಣೆ ಆಗಿಲ್ಲ. ಮೀಟರ್ ಬಡ್ಡಿ ದಂಧೆ ನಡೆಸುವ ಶಾಹಿಬ್ ಮುಲ್ಲಾ ಜನರಿಗೆ ಮಾನಸಿಕ ಹಿಂಸೆ ನೀಡುವ ಆರೋಪಗಳಿದ್ದು, ಈ ಹಿನ್ನಲೆ ಪೊಲೀಸರು ಇನ್ನಷ್ಟು ಎಚ್ಚರಿಕೆವಹಿಸಿದ್ದಾರೆ.
ಈ ಇಬ್ಬರು ಆರೋಪಿತರ ಮನೆ ಮೇಲೆ ಜೂನ್ 28ರಂದು ಹಳಿಯಾಳ ಪಿಐ ಜಯಪಾಲ ಪಾಟೀಲ, ಪಿಸೈ ಮಹೇಶ ಮಾಳಿ ಹಾಗೂ ಅಂಬಿಕಾನಗರ ಪಿಸೈ ಮಹೇಶ ಮೇಲಗಿರಿ ಅವರು ದಾಳಿ ಮಾಡಿದ್ದಾರೆ. ಮನೆಯಲ್ಲಿದ್ದ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಕಾಗದ ಪತ್ರಗಳನ್ನು ಗಮನಿಸಿದ ಅವರು ಅದರ ಬಗ್ಗೆ ಕುಟುಂಬದವರಿAದ ವಿವರಣೆಪಡೆದಿದ್ದಾರೆ.