ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಕೋಟಿ ಗಿಡ ನೆಡುವುದಕ್ಕಾಗಿ ಅರಣ್ಯ ಇಲಾಖೆ 212 ಕೋಟಿ ರೂಪಾಯಿ ಖರ್ಚು ಮಾಡಿದೆ. ಆದರೆ, ಅದರಲ್ಲಿ ಎಷ್ಟು ಗಿಡ ಬದುಕಿದೆ? ಎಂದು ಅಧಿಕಾರಿಗಳ ಬಳಿಯೂ ಲೆಕ್ಕವಿಲ್ಲ!
ಯಲ್ಲಾಪುರದ ಕಿರವತ್ತಿಯ ಹೊಸಳ್ಳಿ ಬಳಿ 10 ದಿನಗಳ ಹಿಂದೆ 200ಕ್ಕೂ ಅಧಿಕ ಗಿಡ ನಾಟಿ ಮಾಡಲಾಗಿದೆ. ಅದರಲ್ಲಿ 70ಕ್ಕೂ ಅಧಿಕ ಗಿಡಗಳು ಈಗ ಬದುಕಿಲ್ಲ. ಇನ್ನಷ್ಟು ಗಿಡಗಳು ಸಾವಿನ ಅಂಚಿನಲ್ಲಿದ್ದು, ಅದರ ರಕ್ಷಣೆಗೆ ಈವರೆಗೂ ಕ್ರಮವಾಗಿಲ್ಲ. ಈ ನಡುವೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗೆ ಉತ್ತರ ಬಂದಿದ್ದು, ಆ ದಾಖಲೆಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ಗಿಡ ನೆಡಲು 2123635800ರೂ ಖರ್ಚು ಮಾಡಿರುವುದು ಗೊತ್ತಾಗಿದೆ. 41385521 ಈ ಹಣ ಬಳಸಿ ಗಿಡಗಳನ್ನು ನೆಡಲಾಗಿದೆ. ಜೊತೆಗೆ, ಈ ವರ್ಷವೂ 9104068 ಗಿಡ ನಾಟಿ ಮಾಡಿದ್ದು, 2026-27ನೇ ಸಾಲಿನಲ್ಲಿ ಖರ್ಚು ಮಾಡಿದ ಹಣ ಎಷ್ಟು ಎಂಬುದು ಇನ್ನೂ ಲೆಕ್ಕಕ್ಕೆ ಸಿಕ್ಕಿಲ್ಲ.
ದಾಖಲೆಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ 58838 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನಾಟಿ ಮಾಡಿದೆ. ಗಿಡ ನಾಟಿ ಮಾಡಿದ ಗುತ್ತಿಗೆದಾರರ ಹೆಸರನ್ನು ಆ ಪ್ರದೇಶದಲ್ಲಿ ಬರೆಯುವ ಬಗ್ಗೆ ಸೂಚನೆ ನೀಡಲಾಗಿದೆ. ಬದುಕಿರುವ ಗಿಡಗಳನ್ನು ಅರಣ್ಯ ಇಲಾಖೆಯ ಕೇಂದ್ರ ಕಚೇರಿಯವರು ಪರಿಶೀಲಿಸಲಿದ್ದಾರೆ. ಪರಿಶೀಲನೆ ನಂತರ ಆ ಮಾಹಿತಿ ನೀಡಲಾಗುತ್ತದೆ’ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ. ಅರಣ್ಯದಲ್ಲಿನ ಗಿಡ ನಾಟಿ ಬಗ್ಗೆ ಅನೇಕ ಪ್ರಶ್ನೆಗಳು ಉದ್ಬವಿಸಿದ ಕಾರಣ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಬಂದ ಉತ್ತರದಲ್ಲಿ ವರ್ಷವಾರು ನಾಟಿ ಮಾಡಿದ ಗಿಡಗಳ ಬಗ್ಗೆ ಮಾಹಿತಿಯಿದ್ದು, ಜೊತೆಗೆ ಮಾಡಿದ ಖರ್ಚುಗಳ ಬಗ್ಗೆಯೂ ವಿವರಿಸಲಾಗಿದೆ.
ಕೇಂದ್ರ ವನ್ಯಜೀವಿ ನಿರ್ವಹಣಾ ಯೋಜನೆಯ ದೃಡೀಕರಣ ವರದಿ ಹಾಗೂ ಅಭಿಯಾರಣ್ಯದಲ್ಲಿ ದೆಹಲಿಯ ಕೇಂದ್ರ ವನ್ಯಜೀವಿ ನಿರ್ವಹಣಾ ಯೋಜನೆಯಿಂದ ಮತ್ತು ಕೇಂದ್ರ ಸರ್ಕಾರದ ಪೂರ್ವಾನುಮತಿಯಿಂದ ನೆಡುತೋಪು ಕಾಮಗಾರಿ ತಂತಿ ಬೇಲಿ, ಇಂಗು ಗುಂಡಿ ಇನ್ನಿತರ ಕಾಮಾಗಾರಿಗೆ ಅನುಮತಿಪಡೆದ ದಾಖಲೆಯನ್ನು ಅರ್ಜಿದಾರರು ಕೇಳಿದ್ದಾರೆ. ಅನುಮೋಧನೆ ಕರಡು ಪ್ರತಿ ತಯಾರಿಸಿದ್ದು, ಅನುಮೋಧನೆ ಆಗಿದ್ದು ಇರುವುದಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ. ಹೀಗಾಗಿ `ಅರಣ್ಯ ಇಲಾಖೆ ಕಾನೂನುಬಾಹಿರವಾಗಿ ಅನುಮೋದನೆ ಪೂರ್ವದಲ್ಲಿ ವನ್ಯಜೀವಿ ನಿರ್ವಹಣಾ ಯೋಜನೆ ಮತ್ತು ಅಭಿಯಾನದಲ್ಲಿ ಕಾಮಗಾರಿ ಕಾರ್ಯ ಜರುಗಿಸುತ್ತಿದೆ’ ಎಂದು ರವೀಂದ್ರ ನಾಯ್ಕ ಅವರು ದೂರಿದ್ದಾರೆ. `ಮಳೆ ಶುರುವಾದ ಹಿನ್ನಲೆ ಯಲ್ಲಾಪುರದಲ್ಲಿ ಗಿಡ ನಾಟಿ ಶುರು ಮಾಡಿದ್ದು, ಮಳೆ ಇಲ್ಲದ ಕಾರಣ ನೀರಿಲ್ಲದೇ ಗಿಡ ಸಾವನಪ್ಪಿದೆ. ಸಾವನಪ್ಪಿದ ಗಿಡಗಳ ಬದಲು ಬೇರೆ ಗಿಡಗಳನ್ನು ನಾಟಿ ಮಾಡಲಾಗುತ್ತದೆ’ ಎಂದು ಸಾಮಾಜಿಕ ಅರಣ್ಯ ವಿಭಾಗದ DFO ಮಂಜುನಾಥ ನಾವಿ ಅವರು ಮೊಬೈಲ್ ಮಿಡಿಯಾ ನೆಟ್ವರ್ಕಗೆ ಪ್ರತಿಕ್ರಿಯಿಸಿದ್ದಾರೆ.