ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಸತ್ತವರ ಹೆಸರಿನಲ್ಲಿಯೂ ಆಧಾರ್ ಕಾರ್ಡ ಸಿದ್ಧಪಡಿಸಿ ಭೂಮಿ ಮಾರಾಟ ದಂಧೆ ನಡೆದಿದ್ದು, ಅಂಥಹ ಒಂದು ಪ್ರಕರಣದ ದಸ್ತಾವೇಜನ್ನು ರದ್ಧುಪಡಿಸಲಾಗಿದೆ. ಆದರೆ, ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವ ದೊಡ್ಡ ಜಾಲವೇ ಈ ಭಾಗದಲ್ಲಿದ್ದರೂ ಅದನ್ನು ತಡೆಯಲು ಸಾಧ್ಯವಾಗಿಲ್ಲ.
ಕಾರವಾರ ಕೋರ್ಟಿಗೆ ನಕಲಿ ಆಧಾರ್ ಕಾರ್ಡ ಜರಾಕ್ಸ್ ಮಾಡಿಕೊಟ್ಟ ಕಾರಣ ಅಲ್ಲಿನ ಪೊಲೀಸರು ಜರಾಕ್ಸ್ ಅಂಗಡಿಯವನ ಮೊಬೈಲ್ ಜಪ್ತು ಮಾಡಿದ್ದಾರೆ. ಆದರೆ, ಅಂಕೋಲಾದಲ್ಲಿ ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವ ವ್ಯಕ್ತಿ ಕೋರಿಯರ್ ಕೂಗಿನಲ್ಲಿ ನಿತ್ಯ `ದರ್ಶನ’ ನೀಡುತ್ತಿದ್ದರೂ ಅವರ ವಿರುದ್ಧ ಯಾವ ಕ್ರಮವೂ ಆಗಿಲ್ಲ. ಆಧಾರ್ ಕಾರ್ಡನಲ್ಲಿರುವ ವಿಳಾಸ ಬದಲಾವಣೆ, ಫೋನ್ ಸಂಖ್ಯೆ ಬದಲಾವಣೆಗೆ ಸಾಮಾನ್ಯ ಜನ ಹತ್ತು ಹಲವು ಅಲೆದಾಟ ಮಾಡಬೇಕಿದೆ. ಆದರೆ, ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಹೆಸರಿನ ರಸ್ತೆಯಲ್ಲಿ ಹುಡುಕಾಡಿದರೆ ಸತ್ತ ವ್ಯಕ್ತಿಗಳಿಗೂ ಆಧಾರ್ ಕಾರ್ಡ ಮಾಡಿಸುವರು ಮಾತಿಗೆ ಸಿಗುತ್ತಿದ್ದು, ಅಲ್ಲಿ ಕಾಸು ಕೊಟ್ಟವರಿಗೆಲ್ಲ ಆಧಾರ್ ಕಾರ್ಡ ಸಿಗುತ್ತಿದೆ ಎಂಬ ಆರೋಪವಿದೆ. ಅದರಲ್ಲಿಯೂ ಅಂಕೋಲಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಅಪಾರ್ಟಮೆಂಟ್ ವ್ಯವಹಾರ ನಡೆಸುವವರಿಗೆ ನಕಲಿ ಆಧಾರ್ ಕಾರ್ಡ ಮಾಡಿಸುವುದು ದೊಡ್ಡ ವಿಷಯವೇ ಅಲ್ಲ ಎಂದು ಮಾತನಾಡುವ ಹಾಗಾಗಿದೆ. ನಕಲಿ ಆಧಾರ್ ಕಾರ್ಡ ದಂಧೆಯಿoದಾದ ಬಾನಗೇಡಿಗಳು ಸಂಪೂರ್ಣವಾಗಿ ಹೊರಬಿದ್ದರೆ ಕಾಕರಮಠದ ಜಟಕದೇವನೂ ಕಾಪಾಡಲಾರ’ ಎಂದು ಜನ ಮಾತನಾಡುತ್ತಿದ್ದಾರೆ.
ಈ ಊರಿನಲ್ಲಿ ನಕಲಿ ಆಧಾರ್ ಕಾರ್ಡ ಮಾಡಿಸುವವರೇ ಭೂ ಮಾರಾಟ ಮಾಡುವ ಎಜೆಂಟರಾಗಿದ್ದು, ಸಾವನಪ್ಪಿದವರ ಹೆಸರಿನಲ್ಲಿಯೂ ದಾಖಲೆ ಸೃಷ್ಠಿಸುವ ಕೌಶಲ್ಯ ಬೆಳಸಿಕೊಂಡಿದ್ದಾರೆ. ರಾಜಕೀಯ ಪಕ್ಷವೊಂದರಲ್ಲಿ ಪ್ರಭಾವಿಯಾಗಿದ್ದ ಮಹಿಳೆಯೊಬ್ಬರ ಸ್ನೇಹವನ್ನು ಅವರು ದುರುಪಯೋಗಪಡಿಸಿಕೊಂಡು, ಅವರನ್ನು ಸಹ ಯಾಮಾರಿಸಿದ್ದಾರೆ. ನಕಲಿ ಆಧಾರ್ ಕಾರ್ಡ ಸಿದ್ಧಪಡಿಸಿ ನಡೆಸಿದ ವ್ಯವಹಾರವೊಂದರಲ್ಲಿ ತೆನೆಹೊತ್ತ ಮಹಿಳೆಯೊಬ್ಬರು ಸಾಕ್ಷಿದಾರರ ಸಹಿ ಹಾಕಿ ಪೇಚಿಗೆ ಸಿಲುಕಿದ್ದಾರೆ. ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವಿಕೆ, ಭೂ ವ್ಯವಹಾರಗಳನ್ನು ನೋಡಿಕೊಳ್ಳುವಿಕೆ ಕೆಲಸ ಮಾಡುವವರಿಗೆ ಈಗಾಗಲೇ ಎರಡು ಅಪಾರ್ಟಮೆಂಟ್ ಸಹ ಉಡುಗರೆಯಾಗಿ ಸಿಕ್ಕಿದೆ.
ಕಾರವಾರ ಕೋರ್ಟಿಗೆ ನಕಲಿ ಆಧಾರ್ ಕಾರ್ಡ ನೀಡಿದ್ದ ಮಹಿಳೆ ನ್ಯಾಯಾಂಗ ವ್ಯವಸ್ಥೆಯನ್ನೇ ಯಾಮಾರಿಸಲು ಪ್ರಯತ್ನಿಸಿದ್ದು, ಸದ್ಯ ಆ ಆಧಾರ್ ಕಾರ್ಡ ಜರಾಕ್ಸ್ ಮಾಡಿದ ಮಳಿಗೆಯವರು ಪೇಚಿಗೆ ಸಿಲುಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಲೈಸ್ ಕುರಿಯನ್ ಚಾಕೋ ಎಂಬ ಮಹಿಳೆ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ ಕೊಟ್ಟಿದ್ದು, ಆ ಪ್ರಕರಣದಲ್ಲಿ ಮೊಬೈಲಿಗೆ ಬಂದ ಆಧಾರ್ ಕಾರ್ಡ ಪ್ರಿಂಟ್ ಹಾಕಿದ ಕಾರಣ ಕಾರವಾರದ ಬ್ರಾಹ್ಮಣಗಲ್ಲಿಯಲ್ಲಿರುವ ಮಾಹಾಮಾಯಿ ಜರಾಕ್ಸ್ ಮಳಿಗೆಯ ಕದ ತಟ್ಟಿದ ಪೊಲೀಸರು ಆಧಾರ್ ಕಾರ್ಡ ಬಗ್ಗೆ ಪ್ರಶ್ನಿಸಿದರು. ಅಲ್ಲಿದ್ದ ಗಜಾನನ ಮೇಸ್ತಾ ಅವರು ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಅಂಕೋಲಾದಲ್ಲಿ ನಕಲಿ ಆಧಾರ್ ಕಾರ್ಡ ಬಳಸಿ ಭೂಮಿ ಮಾರಾಟ ನಡೆದಿದ್ದರೂ ಅಧಿಕಾರಿಗಳ ವಿರುದ್ಧವೂ ಕ್ರಮವಾಗಿಲ್ಲ. ಆಧಾರ್ ಡುಪ್ಲಿಕೇಟ್ ಮಾಡಿದವರ ವಿರುದ್ಧವೂ ಕ್ರಮವಾಗಿಲ್ಲ.