ಚಿನ್ನದ ಆಸೆಗೆ ಸ್ನೇಹಿತೆಯಿಂದಲೇ ದಾಳಿಗೆ ಒಳಗಾದ ಅಂಕೋಲಾದ ಯೋಗೇಶ್ವರಿ ಹರಿಕಂತ್ರ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈವರೆಗೆ 10 ಲಕ್ಷ ರೂ ಖರ್ಚು ಮಾಡಿದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿಲ್ಲ.
ಅoಕೋಲಾದ ಕೂರ್ವೆಯ ಯೋಗೇಶ್ವರಿ ಸೀತಾರಾಮ ಹರಿಕಂತ್ರ ಅವರು ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಬಳಿಯಿದ್ದ ಚಿನ್ನದ ಮೇಲೆ ಆಸೆಪಟ್ಟ ಕೂರ್ವೆ ಮೂಲದ ಸುಷ್ಮಾ ಅಣ್ಣಪ್ಪ ನಾಯ್ಕ ಅವರು ಯೋಗೇಶ್ವರಿ ಅವರ ಮೇಲೆ ದಾಳಿ ಮಾಡಿ, ಚಿನ್ನ ಕದ್ದಿದ್ದರು. ಮೇ 12ರ ರಾತ್ರಿ ಯೋಗೇಶ್ವರಿ ಅವರು ಕೋಣೆಯಲ್ಲಿ ಮಲಗಿದ್ದಾಗ ಮಾರಣಾಂತಿಕ ದಾಳಿ ನಡೆದಿದ್ದು, ಇನ್ನಿತರ ಸ್ನೇಹಿತರು ಆ ಕೋಣೆ ಪ್ರವೇಶಿಸಿದಾಗ ಯೋಗೇಶ್ವರಿ ಅವರು ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ಅವರೆಲ್ಲರೂ ಸೇರಿ ಯೋಗೇಶ್ವರಿ ಹರಿಕಂತ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಕರಣದ ಬಗ್ಗೆ ವಿಚಾರಣೆ ಶುರು ಮಾಡಿದ ಮಣಿಪಾಲ ಪೊಲೀಸರು ಆರಂಭದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಸತ್ಯ ಹೊರ ಬಿದ್ದಿರಲಿಲ್ಲ. ಆ ಕಟ್ಟಡದಲ್ಲಿ ಸಿಸಿಟಿವಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಮೊಬೈಲ್ ಪರಿಶೀಲನೆಯಲ್ಲಿಯೂ ಯಾವುದೇ ಸುಳಿವು ಸಿಗದಿರುವುದು ತನಿಖೆಗೆ ಸವಾಲಾಗಿತ್ತು. ಮಣಿಪಾಲ ಠಾಣೆಯ ಸಿಪಿಐ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ಸಮರ್ಪಕ ತನಿಖೆಗೆ ಸೂಚಿಸಿದ್ದರು. ಯೋಗೇಶ್ವರಿಯ ಸ್ನೇಹಿತರು ಹಾಗೂ ಆಸ್ಪತ್ರೆಗೆ ದಾಖಲಿಸಲು ಬಂದವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಆರೋಪಿಯ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬoದಿದ್ದರಿoದ ಸತ್ಯ ಹೊರ ಬಂದಿತ್ತು.
ಕೂರ್ವೆ ಮೂಲದ ಸುಷ್ಮಾ ಅಣ್ಣಪ್ಪ ನಾಯ್ಕ ಎಂಬಾಕೆ ಚಿನ್ನದ ಸರ ಕಳವು ಮಾಡುವ ಉದ್ದೇಶದಿಂದ ಯೋಗೇಶ್ವರಿಯ ಮೇಲೆ ಹಲ್ಲೆ ನಡೆಸಿರುವುದು ತನಿಖೆಯಲ್ಲಿ ಗೊತ್ತಾಯಿತು. ಕೋಣೆಯಲ್ಲಿ ಮಲಗುವ ನೆಪದಲ್ಲಿ ಬಂದಿದ್ದ ಆರೋಪಿಯು ಸಿಮೆಂಟ್ ಕಲ್ಲಿನಿಂದ ಯೋಗೇಶ್ವರಿಯ ತಲೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಪೊಲೀಸರ ಅರಿವಿಗೆ ಬಂದಿತು. ಮೂರು ಗಂಟೆಗಳ ಕಾಲ ತೀವ್ರ ರಕ್ತಸ್ರಾವವಾಗಿದ್ದರಿಂದ ಯೋಗೇಶ್ವರಿಯ ಮೆದುಳಿಗೆ ಗಂಭೀರ ಆಘಾತ ಆದ ಬಗ್ಗೆ ವೈದ್ಯರು ಹೇಳಿದ್ದರು.
ಹಲವು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯೋಗೇಶ್ವರಿಯನ್ನು ಉಳಿಸಿಕೊಳ್ಳಲು ಪೋಷಕರು ಸಾಲ ಮಾಡಿದರು. ಇತರರ ನೆರವಿನಿಂದಲೂ ಈಗಾಗಲೇ 10ರೂ ಖಾಲಿ ಮಾಡಿದರು. ಪ್ರಸ್ತುತ ಮೆದುಳಿಗೆ ಗಂಭೀರ ಗಾಯವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮುಂದಿನ ಚಿಕಿತ್ಸೆಗೆ ಇನ್ನೂ ಸುಮಾರು 7 ಲಕ್ಷ ರೂ ಅಗತ್ಯವಿದ್ದು, ಹಣ ಹೊಂದಿಸಲಾಗದೆ ಕುಟುಂಬಸ್ಥರು ಅಸಹಾಯಕರಾಗಿದ್ದಾರೆ.
ಯೋಗೇಶ್ವರಿ ಹರಿಕಂತ್ರ ಅವರ ಚಿಕಿತ್ಸೆಗೆ ನೆರವು ನೀಡಲು ಬಯಸುವವರು ಇಲ್ಲಿ ಸ್ಕಾನ್ ಮಾಡಿ
