ದೇವಾಲಯ ಅಭಿವೃದ್ಧಿ ಮಾಡುವುದಾಗಿ ಜನರಿಂದ ಸಂಗ್ರಹಿಸಿದ ಹಣ ದುಷ್ಟರ ಪಾಲಾಗಿದೆ. ನಟರಾಜ ಹೊಸೂರು, ರಾಜೇಂದ್ರ ಗೌಡ ಹಾಗೂ ಸುನೀಲ ಗೌಡ ಅವರು ಮತ್ತೆ ಏಳು ಜನರ ಜೊತೆ ಸೇರಿ 3.50 ಲಕ್ಷ ರೂ ಲಪಟಾಯಿಸಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಬಳಿಯ ದನಗನಹಳ್ಳಿಯಲ್ಲಿ ಈಶ್ವರ ದೇವಸ್ಥಾನವಿದ್ದು, ಅದರ ಅಭಿವೃದ್ಧಿಗಾಗಿ ಜನರಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಈ ಕಾರ್ಯಕಾರಿ ಸಮಿತಿಗೆ ದನಗರಹಳ್ಳಿಯ ಜಗದೀಶ ಚನ್ನಬಸಪ್ಪ ಮುರುಗಣ್ಣನವರ್ ಅವರು ಸದಸ್ಯರಾಗಿದ್ದಾರೆ. ಸದ್ಯ ದೇವರ ಹೆಸರಿನಲ್ಲಿ ದುಡ್ಡು ಹೊಡೆದಿರುವುದು ಅವರ ಗಮನಕ್ಕೆ ಬಂದಿದೆ. ದಾಸಗನಳ್ಳಿಯ ನಟರಾಜ ಭೀಮಪ್ಪ ಹೊಸೂರು, ಶಿರಸಿ ಕಪ್ಪಗುಡ್ಡೆ ವದ್ದಲದ ರಾಜೇಂದ್ರ ಪುಟ್ಟಪ್ಪ ಗೌಡ ಹಾಗೂ ಕಪ್ಪಗುಡ್ಡ ಕರ್ಡೇರ ಬಳಿಯ ಸುನೀಲ ಬಸವರಾಜ ಗೌಡ ಅವರು ಮತ್ತೆ ಏಳು ಜನರ ಜೊತೆ ಸೇರಿ ದೇವರ ದುಡ್ಡು ಲಪಟಾಯಿಸಿರುವಾಗಿ ಅವರು ದೂರಿದ್ದಾರೆ.
`ದಾಸಗನಳ್ಳಿಯ ನಟರಾಜ ಭೀಮಪ್ಪ ಹೊಸೂರು ಅವರು ಕಾಳಂಗಿ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷರೂ ಆಗಿದ್ದು, ಈತ ದೇಗುಲದ ಅಭಿವೃದ್ಧಿಗೆ ದೇಣಿಗೆಪಡೆದು ಅದನ್ನು ಸೊಸೈಟಿ ಖಾತೆಯಲ್ಲಿ ಜಮಾ ಮಾಡುತ್ತಿದ್ದರು. ಸದ್ಯ ಅವರೇ ಆ ಹಣ ದೂರುಪಯೋಗಪಡಿಸಿಕೊಂಡಿದ್ದಾರೆ ಎಂದು ಜಗದೀಶ ಮುರಗಣ್ಣನವರ್ ಅವರು ಆರೋಪಿಸಿದ್ದಾರೆ. 2015ರ ಮಾರ್ಚ 31ರಂದು ಆ ಖಾತೆಯಲ್ಲಿ 1,81,814ರೂ ದೇಣಿಗೆ ಜಮಾ ಆಗಿತ್ತು. 2025ರ ಮಾರ್ಚ 31ರಂದು 323795ರೂ ಜಮಾ ಇದ್ದು, 2025ರ ಮೇ 14ರಂದು ದಿಢೀರ್ ಆಗಿ 320000ರೂ ಖರ್ಚು ಎಂದು ಕಾಣಿಸಿ ಹಣ ಹೊಡೆಯಲಾಗಿದೆ’ ಎಂದವರು ವಿವರಿಸಿದ್ದಾರೆ.
`ಆ ಹಣ ಬಸವೇಶ್ವರ ಯುವಕ ಸಂಘ ಎಂಬ ಖಾತೆಗೆ ಜಮಾ ಆಗಿದೆ. ನಂತರ ಸಂಘದವರು ಆ ಹಣವನ್ನು ಕೆನರಾ ಬ್ಯಾಂಕ್ ಖಾತೆಯ ದುರ್ಗಾದೇವಿ ಟ್ರಸ್ಟ್ ಖಾತೆಗೆ ಜಮಾ ಮಾಡಿದ್ದು, ಈ ವೇಳೆ ದುರ್ಗಾ ದೇವಿ ಟ್ರಸ್ಟ್ ಖಾತೆಯಲ್ಲಿ ಹಳೆಯದನ್ನು ಸೇರಿಸಿ 3.50 ಲಕ್ಷ ರೂ ಜಮಾ ಆಗಿದೆ. 2025ರ ಅಕ್ಟೊಬರ್ 13ರಂದು ನಟರಾಜ ಅವರ ಪಂಜಾಬ್ ನ್ಯಾಶನಲ್ ಬ್ಯಾಂಕ್ ಖಾತೆಗೆ ಈ 3.50 ಲಕ್ಷ ರೂ ಹೋಗಿದೆ. ನಕಲಿ ದಾಖಲೆ ಸೃಷ್ಠಿಸಿ ಈ ಹಣ ಹೊಡೆಯಲಾಗಿದ್ದು, ಶಿರಸಿ ಕಪ್ಪಗುಡ್ಡೆ ವದ್ದಲದ ರಾಜೇಂದ್ರ ಪುಟ್ಟಪ್ಪ ಗೌಡ ಹಾಗೂ ಕಪ್ಪಗುಡ್ಡ ಕರ್ಡೇರ ಬಳಿಯ ಸುನೀಲ ಬಸವರಾಜ ಗೌಡ ಅವರು ಇದಕ್ಕೆ ಕೈ ಜೋಡಿಸಿದ್ದಾರೆ’ ಎಂದವರು ಹೇಳಿದ್ದಾರೆ. ಶಿರಸಿ ದನಗನಹಳ್ಳಿಯ ಜಗದೀಶ ಚನ್ನಬಸಪ್ಪ ಮುರುಗಣ್ಣನವರ್ ಅವರ ದೂರಿನ ಪ್ರಕಾರ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿ, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.