ಅಪ್ರಾಪ್ತೆ ಮೇಲಿನ ಅತ್ಯಾಚಾರ, ಸುಲಿಗೆ, ಮಾದಕ ದೃವ್ಯ ಸಾಗಾಟ, ಕಳ್ಳತನ ಸೇರಿ ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾಗಿದ್ದ ಸಂತೋಷ ಬೋವಿವಡ್ಡರ್ ಅವರನ್ನು ಪೊಲೀಸರು ಊರು ಬಿಟ್ಟು ಓಡಿಸಿದ್ದಾರೆ. ಸದ್ಯ ಸಂತೋಷ ಬೊವಿವಡ್ಡರ್ ಬೆಂಗಳೂರು ತಲುಪಿದ್ದು, ಅಲ್ಲಿಯೇ ಹೊಸ ಜೀವನ ಶುರು ಮಾಡುವ ಪ್ರಯತ್ನದಲ್ಲಿದ್ದಾರೆ.
ಶಿರಸಿ ಬನವಾಸಿಯ ಬದನಗೋಡಿನ ಸಂತೋಷ ಫಕ್ಕಿರಪ್ಪ ಬೋವಿವಡ್ಡರ್ ಅವರು ವಾಸವಾಗಿದ್ದರು. 27ನೇ ವಯಸ್ಸಿನಲ್ಲಿಯೇ ಅವರು ರೌಡಿಯಾಗಿ ಗುರುತಿಸಿಕೊಂಡಿದ್ದು, ಅಪ್ತಾಪ್ತೆಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಜೊತೆಗೆ ಸುಲಿಗೆ, ಗಾಂಜಾ ಸಾಗಾಟ, ಕಳ್ಳತನ ಸೇರಿ 11 ಕೇಸುಗಳು ಅವರ ವಿರುದ್ಧ ದಾಖಲಾಗಿದ್ದವು. 10 ಪ್ರಕರಣಗಳ ವಿಚಾರಣೆ ನಡೆದಿದ್ದು, ಒಂದು ಪ್ರಕರಣದ ತನಿಖೆ ನಡೆಯುತ್ತಿತ್ತು. ಈ ಎಲ್ಲದರ ನಡುವೆ ಸಂತೋಷ ಬೋವಿವಡ್ಡರ್ ಅವರಿಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡಿದ್ದರು. ಆದರೆ, ಸಂತೋಷ ಬೋವಿವಡ್ಡರ್ ಅವರ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ.
ಹೀಗಾಗಿ ಬನವಾಸಿ ಪೊಲೀಸರು ಸಂತೋಷ ಬೋವಿವಡ್ಡರ್ ವಿರುದ್ಧ ರೌಡಿ ಶೀಟರ್ ಹಾಳೆ ತೆರೆದು, ಅವರ ಮೇಲೆ ನಿಗಾವಿರಿಸಿದ್ದರು. ಸಮಾಜಘಾತಕ ಕೃತ್ಯ ಮುಂದುವರೆದ ಕಾರಣ ಅವರ ಉಪಟಳ ಸಹಿಸಿಕೊಳ್ಳುವ ಹಾಗಿರಲಿಲ್ಲ. ಅದಕ್ಕಾಗಿ ಪೊಲೀಸರು ಅವರನ್ನು ಊರು ಬಿಟ್ಟು ಓಡಿಸಲು ನಿರ್ಧರಿಸಿದ್ದು, ಗಡಿಪಾರು ಮಾಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರು. ಬನವಾಸಿ ಪೊಲೀಸರು ಕಳುಹಿಸಿದ ಶಿಪಾರಸ್ಸು ಗಮನಿಸಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸಂತೋಷ ಬೋವಿವಡ್ಡರ್ ಅವರಿಗೆ ನೋಟಿಸ್ ಜಾರಿ ಮಾಡಿದರು. ಅದಕ್ಕೆ ಸೂಕ್ತ ಸಮಜಾಯಿಶಿ ಬಾರದ ಕಾರಣ ಗಡಿಪಾರು ಮಾಡಿ ಆದೇಶ ಹೊರಡಿಸಿದರು.
ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ಸಂತೋಷ ಬೋವಿವಡ್ಡರ್ ಅವರನ್ನು ಹಿಡಿದ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದೊಯ್ದರು. ಅತ್ತಿಬೆಲೆ ಪೊಲೀಸ್ ಠಾಣೆಗೆ ಅವರನ್ನು ಹಾಜರುಪಡಿಸಿ, ಮುಂದಿನ ಆದೇಶದವರೆಗೂ ಉತ್ತರ ಕನ್ನಡ ಜಿಲ್ಲೆಗೆ ಬಾರದಂತೆ ಸೂಚಿಸಿದರು. ಸದ್ಯ ಸಂತೋಷ ಬೋವಿವಡ್ಡರ್ ಅವರು ಅತ್ತಿವೇರಿ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಬೇಕಿದ್ದು, ಅವರ ಚಲನ-ವಲನದ ಬಗ್ಗೆ ಅಲ್ಲಿನ ಪೊಲೀಸರು ಕಣ್ಣಿಟ್ಟಿದ್ದಾರೆ.