`ವಿದೇಶದಲ್ಲಿ ಕೆಲಸ ಮಾಡಬೇಕು. ಲಕ್ಷ ಲಕ್ಷ ರೂ ಸಂಪಾದಿಸಬೇಕು’ ಎಂದು ಕನಸು ಕಂಡಿದ್ದ ಭಟ್ಕಳದ ಅನೀಲ ನಾಯ್ಕ ಅವರು ಮಹಮದ್ ಅಲಿ ಹಾಗೂ ಸಹಚರರಿಗೆ ಎರಡುವರೆ ಲಕ್ಷ ರೂ ಹಣ ಕೊಟ್ಟಿದ್ದಾರೆ. ಆದರೆ, ಅವರಿಗೆ ವಿದೇಶದಲ್ಲಿ ಉದ್ಯೋಗವೂ ಸಿಕ್ಕಿಲ್ಲ. ಕೊಟ್ಟ ಹಣವನ್ನು ಅವರು ಮರಳಿಸಿಲ್ಲ!
ಭಟ್ಕಳ ಕಾಯ್ಕಿಣಿಯ ಜನತಾ ಕಾಲೋನಿಯಲ್ಲಿ ಅನಿಲ ಮಂಜಯ್ಯ ನಾಯ್ಕ ಅವರು ವಾಸವಾಗಿದ್ದಾರೆ. ಕ್ಲಿನರ್ ಆಗಿ ಅವರು ಬದುಕು ನಡೆಸುತ್ತಿದ್ದಾರೆ. `ಕಷ್ಟದ ಜೀವನ ಸಾಕು’ ಎಂದು ನಿರ್ಧರಿಸಿದ ಅವರು `ವಿದೇಶದಲ್ಲಿ ಉದ್ಯೋಗ ಮಾಡಿ, ಸಾಕಷ್ಟು ಹಣ ಸಂಪಾದಿಸಬೇಕು’ ಎಂದು ಕನಸು ಕಂಡಿದ್ದಾರೆ. ಇನ್ನೂ 24 ವರ್ಷದ ಅನಿಲ ನಾಯ್ಕ ಅವರಿಗೆ ಭಟ್ಕಳದ ಮುಗ್ದುಂ ಕಾಲೋನಿಯ ಮಹಮ್ಮದ್ ಅಯ್ಯೂಬ್ ಅಲಿ ಅವರ ಪರಿಚಯವಾಗಿದೆ. ಅವರ ಜೊತೆ ಉಮ್ಮರ್ ಸ್ಟ್ರೀಟ್ನ ಅಬ್ದುಲ್ ಮುತಾಲಿಬ್ ಕುಂದನಗೂಡ ಹಾಗೂ ಅಲ್ತಾಫ್ ಎಂಬಾತರು ಸೇರಿ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ.
`ವಿದೇಶದಲ್ಲಿ ಉದ್ಯೋಗ ಕೊಡಿಸಲು ಸ್ವಲ್ಪ ಖರ್ಚಾಗುತ್ತದೆ’ ಎಂದು ಆ ಮೂವರು ಸೇರಿ ಅನಿಲ ನಾಯ್ಕ ಅವರನ್ನು ನಂಬಿಸಿದ್ದಾರೆ. ವಿದೇಶಕ್ಕೆ ಹೋಗಬೇಕು ಎಂದು ಅನಿಲ ನಾಯ್ಕ ಅವರು 2.49 ಲಕ್ಷ ರೂ ಒಟ್ಟುಗೂಡಿಸಿದ್ದು, ಅದನ್ನು ಆ ಮೂವರ ಕೈಗೆ ಕೊಟ್ಟಿದ್ದಾರೆ. ಜೊತೆಗೆ ವಿದೇಶಿ ವಿಮಾನ ಯಾನಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿ ತಮ್ಮ ಪಾಸ್ ಪೋರ್ಟನ್ನು ಸಹ ನೀಡಿದ್ದಾರೆ. ಆದರೆ, ಆ ಮೂವರು ಅನಿಲ ನಾಯ್ಕ ಅವರನ್ನು ವಿದೇಶಕ್ಕೆ ಕಳುಹಿಸಿಕೊಟ್ಟಿಲ್ಲ. ಅಲ್ಲಿ ಉದ್ಯೋಗವನ್ನು ಕೊಡಿಸಿಲ್ಲ. ಕೊಟ್ಟ ಹಣವನ್ನು ಸಹ ಮರಳಿಸಿಲ್ಲ.