ಭಟ್ಕಳದಲ್ಲಿ ನಡೆದ ಚಿಪ್ಪಿಕಲ್ಲು ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಆನಂದ ನಾಯ್ಕ ಅವರು ತಾಯಿ ಅಗಲುವಿಕೆಯ ನೋವು ಸಹಿಸಲಾಗದೇ ಸಾವನಪ್ಪಿದ್ದಾರೆ. ಮಾನಸಿಕವಾಗಿ ಕುಗ್ಗಿದ ಅವರು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.
ಕೆಲ ದಿನದ ಹಿಂದೆ ಭಟ್ಕಳದ ವೆಂಕಟಾಪುರ ನದಿಯ ತಟ್ಟಿಹಕ್ಕಲ ಹೊಳೆಯಲ್ಲಿ ಚಿಪ್ಪೆಕಲ್ಲು ಆರಿಸಲು ಹೋಗಿದ್ದ 14 ಜನ ನೀರಿನಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ್ದರು. ಅದರಲ್ಲಿ ಬೆಂಗ್ರೆ ಬಳಿಯ ಮೋಳಿನಮನೆಯ ಆನಂದ ಅಣ್ಣಪ್ಪ ನಾಯ್ಕ (36) ಅವರ ತಾಯಿ ಲಕ್ಷಿ ನಾಯ್ಕ ಅವರು ಸಹ ಕೊನೆಯುಸಿರೆಳೆದಿದ್ದರು. ತಾಯಿ ಸಾವಿನ ನಂತರ ಆನಂದ ನಾಯ್ಕ ಅವರು ವಿಪರೀತ ಪ್ರಮಾಣದಲ್ಲಿ ಮದ್ಯ ಸೇವಿಸಲು ಶುರು ಮಾಡಿದ್ದು, ಮಾನಸಿಕವಾಗಿ ಕುಗ್ಗಿದ್ದರು. ಮೊನ್ನೆ ಮಧ್ಯಾಹ್ನವೂ ಅವರು ಮಾನಸಿಕ ಅಸ್ವಸ್ಥರ ಹಾಗೇ ವರ್ತಿಸಿದ್ದು, ಮನೆ ಒಳಗಿನಿಂದ ಬಾಗಿಲು ಹಾಕಿಕೊಂಡು ಅದಕ್ಕೆ ಬೀಗ ಜಡಿದಿದ್ದರು. ಅದಾದ ನಂತರ ಮನೆಯ ಮೇಲ್ಚಾವಣಿ ಹಂಚು ತೆಗೆದು ಅಲ್ಲಿಂದ ಹೊರಬಂದು ಬಾವಿಗೆ ಹಾರಿದ್ದಾರೆ.
ಆನಂದ ನಾಯ್ಕ ಅವರು ಎಂ ಕಾಂ ಪದವಿದರರಾಗಿದ್ದರೂ ಅವರಿಗೆ ಉದ್ಯೋಗವಿರಲಿಲ್ಲ. ಇದರಿಂದಲೂ ಅವರು ಮಾನಸಿಕ ನೋವು ಅನುಭವಿಸುತ್ತಿದ್ದರು. ಆಗಾಗ, ಮದ್ಯ ಸೇವನೆ ಮಾಡುತ್ತಿದ್ದ ಆನಂದ ನಾಯ್ಕ ಅವರು ಚಿಪ್ಪೆಕಲ್ಲು ದುರಂತದಲ್ಲಿ ತಾಯಿ ಕಳೆದುಕೊಂಡ ನಂತರ ದೊಡ್ಡ ಪ್ರಮಾಣದಲ್ಲಿ ವ್ಯಸನದ ದಾಸರಾಗಿದ್ದರು. ಕುಡಿತಕ್ಕೆ ಹಣ ಕೊಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಅವರು ಕುಟುಂಬದವರನ್ನು ಬೆದರಿಸುತ್ತಿದ್ದರು. ಸದ್ಯ ಶವವನ್ನು ಬಾವಿಯಿಂದ ಮೇಲೆತ್ತಲಾಗಿದೆ. ಪತ್ನಿ ಹಾಗೂ ಮಗನನ್ನು ಕಳೆದುಕೊಂಡ ಅಣ್ಣಪ್ಪ ನಾಯ್ಕ ಅವರು ಘಟನಾವಳಿಗಳ ಬಗ್ಗೆ ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.