ಕಂಠಪೂರ್ತಿ ಕುಡಿದು ಕರ್ಕಶ ಶಬ್ದ ಮಾಡುವ ಕೆಟಿಎಂ ಬೈಕ್ ಓಡಿಸಿದ ಹಳೆ ದಾಂಡೇಲಿಯ ದಿನೇಶ ಪವಾರ್ ಅವರು ಅದನ್ನು ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಮಂಗಲದಾಸ ನಾಯ್ಕ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. `ಒಂದು ವರ್ಷ ಜೈಲಿಗೆ ಹೋಗಲು ಸಿದ್ಧ’ ಎಂದು ಕೂಗಾಡಿದ ದಿನೇಶ ಪವಾರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
26 ವರ್ಷದ ದಿನೇಶ ರಾಜಾರಾಮ ಪವಾರ್ ಅವರು ಹಳೆ ದಾಂಡೇಲಿಯಲ್ಲಿ ವಾಸವಾಗಿದ್ದಾರೆ. ವ್ಯಾಪಾರಿಯಾಗಿರುವ ಅವರು ದುಡಿಮೆಯ ಹಣವನ್ನು ದುಶ್ಚಟಕ್ಕೆ ಬಳಸುತ್ತಿದ್ದಾರೆ. ಜುಲೈ 10ರ ರಾತ್ರಿ ಅವರು ಕಂಠಪೂರ್ತಿ ಸರಾಯಿ ಕುಡಿದು ಬೈಕ್ ಓಡಿಸಿದ್ದಾರೆ. ಕರ್ಕಶ ಶಬ್ದ ಮಾಡುವ ಬೈಕ್ ಓಡಿದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಮಂಗಲದಾಸ ನಾಯ್ಕ ಅವರು ದಿನೇಶ ಪವಾರ್ ಅವರ ವಿಚಾರಣೆಗೆ ಹೋಗಿದ್ದಾರೆ.
ಸರಾಯಿ ಕುಡದ ಪ್ರಮಾಣ ಪರೀಕ್ಷಿಸಲು ಬ್ರೀಥ್ ಅನಲೈಜರ್ ಜೊತೆ ಸ್ಥಳಕ್ಕೆ ಹೋದ ಪೊಲೀಸ್ ಸಿಬ್ಬಂದಿ ಮಂಗಲದಾಸ ನಾಯ್ಕ ಅವರ ಬಳಿ ದಿನೇಶ ಪವಾರ್ ಅವರು ಗಲಾಟೆ ಮಾಡಿದ್ದಾರೆ. `ಹೆಣ್ಣು ಮಕ್ಕಳು ಓಡಾಡುವ ಪ್ರದೇಶ. ತೊಂದರೆ ಕೊಡಬೇಡ’ ಎಂದು ಪೊಲೀಸರು ಬುದ್ದಿ ಹೇಳಿದಾಗ ದಿನೇಶ ಪವಾರ್ ಅವರು ಇನ್ನಷ್ಟು ಸಿಟ್ಟಾಗಿದ್ದಾರೆ. `ಏನು ಮಾಡುತ್ತೀರಾ? ಒಳಗೆ ಹಾಕುತ್ತೀರಾ? ನನಗೂ ಹಾಕಿ, ಗಾಡಿಗೂ ಹಾಕಿ. ಒಂದು ವರ್ಷ ಒಳಗೆ ಹೋಗಿ ಬರುವೆ’ ಎಂದು ಕೂಗಾಡಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ದಿನೇಶ ಪವಾರ್ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು, ಜನರನ್ನು ಉದ್ದೇಶಿಸಿ ಕೆಟ್ಟದಾಗಿ ಬೈದಿದ್ದಾರೆ.
ಇದಲ್ಲದೇ ದಿನೇಶ ಪವಾರ್ ತಮ್ಮ ಮೊಬೈಲ್ ತೆಗೆದು ವಿಡಿಯೋ ಮಾಡಿ, ಕೆಟ್ಟ ಪದಗಳ ಪ್ರಯೋಗ ಮಾಡಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಮಾಡಿದ ವ್ಯಾಪಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.