ಪೆಟ್ರೋಲ್ ಖಾಲಿಯಾದ ಕಾರಣ ಬೈಕ್ ದೂಡಿಕೊಂಡು ಹೋಗುತ್ತಿದ್ದ ರಾಘವೇಂದ್ರ ಲಕ್ಷ್ಮೀಶ್ವರ ಅವರಿಗೆ ಗೋಕರ್ಣ ಪೊಲೀಸರು ಪೆಟ್ರೋಲ್ ಕೊಡಿಸಿದ್ದಾರೆ. ರಾತ್ರಿ ಪ್ರಯಾಣದ ಸಮಸ್ಯೆಗೆ ಸಿಲುಕಿದ್ದ ಸವಾರನನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದ್ದಾರೆ.
ಕುಮಟಾದ ದೇವರಹಕ್ಕಲ ರಾಘವೇಂದ್ರ ಲಕ್ಷ್ಮೀಶ್ವರ ಅವರು ವಾಸವಾಗಿದ್ದಾರೆ. ಮೊನ್ನೆ ರಾತ್ರಿ ಅವರು ಕೆಲಸದ ನಿಮಿತ್ತ ಯಲ್ಲಾಪುರಕ್ಕೆ ಹೋಗಿದ್ದು, ಮರಳುವಾಗ ಸಮಸ್ಯೆಗೆ ಸಿಲುಕಿದ್ದಾರೆ. ಮಾದನಗೇರಿ ಬಳಿ ಅವರ ಬೈಕ್ ಪೆಟ್ರೋಲ್ ಪೂರ್ತಿ ಖಾಲಿ ಆಗಿದೆ. ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್ ಸಹ ಹಾಳಾಗಿದೆ. ಇದರಿಂದ ದಿಕ್ಕೆಟ್ಟ ರಾಘವೇಂದ್ರ ಲಕ್ಷ್ಮೀಶ್ವರ ಅವರು ಅಲ್ಲಿ ಇಲ್ಲಿ ಪೆಟ್ರೋಲ್ ಬೇಡಿದ್ದಾರೆ. ಸಮೀಪದ ಲಾಡ್ಜು, ಗೂಡಗಂಡಿ, ರಿಕ್ಷಾ ಚಾಲಕರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಆದರೆ, ಆ ರಾತ್ರಿ ಸಮಯದಲ್ಲಿ ಯಾರಿಗೂ ಸಹಾಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕಿಲೋ ಮೀಟರ್ ದೂರದವರೆಗೆ ಅವರು ಬೈಕ್ ತಳ್ಳಿಕೊಂಡು ಹೊರಟಿದ್ದಾರೆ. ಈ ನಡುವೆ ಅವರಿಗೆ ಪೊಲೀಸರ ನೆನಪಾಗಿದೆ. ಧೈರ್ಯ ಮಾಡಿ ಅವರು 112ಗೆ ಫೋನ್ ಮಾಡಿದ್ದಾರೆ.
ಕಾರವಾರ ಪೊಲೀಸ್ ಕಂಟ್ರೋಲ್ ರೂಮಿನಲ್ಲಿ ಆಗ ರಫಿಕ್ ಹೀರೆಮನಿ ಅವರು ಕರ್ತವ್ಯದಲ್ಲಿದ್ದು, ಫೋನ್ ಸ್ವೀಕರಿಸಿದ ಅವರ ಬಳಿ ರಾಘವೇಂದ್ರ ಲಕ್ಷ್ಮೀಶ್ವರ ಅವರು ತಮಗಾದ ಸಮಸ್ಯೆ ಹೇಳಿದ್ದಾರೆ. `ನೆರವು ನೀಡಿ’ ಎಂದು ಮನವಿ ಮಾಡಿದ್ದಾರೆ. ಫೋನ್ ಕಟ್ ಆದ 15 ನಿಮಿಷದ ಒಳಗೆ ಅಲ್ಲಿ 112 ಪೊಲೀಸ್ ಜೀಪ್ ಬಂದಿದೆ. ಆ ಜೀಪಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಸಚಿನ್ ನಾಯಕ ಅವರು ರಾಘವೇಂದ್ರ ಲಕ್ಷ್ಮೀಶ್ವರ ಅವರ ಕಷ್ಟ ಅರ್ಥ ಮಾಡಿಕೊಂಡಿದ್ದಾರೆ. `ಮನೆಯಲ್ಲಿ ಅಪ್ಪ-ಅಮ್ಮ ಮಾತ್ರವಿದ್ದು, ಅವರು ಕಾಯುತ್ತಿದ್ದಾರೆ. ಎಷ್ಟೇ ರಾತ್ರಿಯಾದರೂ ಮನೆ ಮುಟ್ಟಬೇಕು’ ಎಂದು ರಾಘವೇಂದ್ರ ಲಕ್ಷ್ಮೀಶ್ವರ ಅವರು ಹೇಳಿದ್ದಾರೆ. ಕೂಡಲೇ ಕಾರ್ಯಪ್ರರ್ವತ್ತರಾದ ಪೊಲೀಸ್ ಸಿಬ್ಬಂದಿ ಸಚಿನ್ ನಾಯಕ ಹಾಗೂ ಅವರ ವಾಹನ ಚಾಲಕ ವಿಘ್ನೇಶ್ವರ ತಾಂಡೇಲ್ ಸೇರಿ ರಾಘವೇಂದ್ರ ಲಕ್ಷ್ಮೀಶ್ವರ ಅವರನ್ನು 4ಕಿಮೀ ದೂರದ ಪೆಟ್ರೋಲ್ ಬಂಕಿಗೆ ಕರೆದೊಯ್ದಿದ್ದಾರೆ. ಅವರಿಗೆ ಪೆಟ್ರೋಲ್ ಕೊಡಿಸಿ, ಬೈಕ್ ಏರುವವರೆಗೂ ಜೊತೆಗೆ ನಿಂತಿದ್ದಾರೆ.
ಪೊಲೀಸರು ಮಾಡಿದ ಈ ಸಹಾಯದಿಂದ ರಾಘವೇಂದ್ರ ಲಕ್ಷ್ಮೀಶ್ವರ ಅವರು ರಾತ್ರಿ 2.30ಕ್ಕೆ ಮನೆಗೆ ಮುಟ್ಟಿದ್ದಾರೆ. ಪೊಲೀಸರೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯವಿರುತ್ತದೆ. ಆದರೆ, ಪೊಲೀಸರ ಈ ಒಂದು ಕೆಲಸದಿಂದಾಗಿ ಅನೇಕರ ಭಯ ದೂರವಾಗಿದೆ. ಈ ಬಗ್ಗೆ ರಾಘವೇಂದ್ರ ಲಕ್ಷ್ಮೀಶ್ವರ ಅವರು ಸಹ ತಮ್ಮ ಅನುಭವ ಬರೆದುಕೊಂಡಿದ್ದು, ಪೊಲೀಸರು ಕಿಂಚಿತ್ತು ಬೇಸರಿಸಿಕೊಳ್ಳದೇ ಸಹಾಯ ಮಾಡಿದನ್ನು ಸ್ಮರಿಸಿದ್ದಾರೆ.
`ತುರ್ತು ಸನ್ನಿವೇಶಗಳಲ್ಲಿ 112ಗೆ ಫೋನ್ ಮಾಡಿ’