ಕಾರವಾರದ ವಿಜ್ಞಾನ ಕೇಂದ್ರದಲ್ಲಿ ಅಧಿಕಾರಿಯೊಬ್ಬರ ಪುತ್ರನ `ಬರ್ತಡೆ ಪಾರ್ಟಿ’ ನಡೆದಿದೆ. ಸರ್ಕಾರಿ ಕರ್ತವ್ಯದಲ್ಲಿದ್ದ ಅನೇಕ ಅಧಿಕಾರಿಗಳು ಕರ್ತವ್ಯದ ವೇಳೆಯಲ್ಲಿಯೇ ಈ ಪಾರ್ಟಿಗೆ ಹೋಗಿದ್ದಾರೆ.
ಕಾರವಾರದ ಕೋಡಿಭಾಗದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಕೆಲಸ ಮಾಡಲಾಗುತ್ತದೆ. ವಿವಿಧ ಶೈಕ್ಷಣಿಕ ಕಾರ್ಯಾಗಾರ, ವಿಜ್ಞಾನ ಪ್ರದರ್ಶನ ಹಾಗೂ ಆಕಾಶ ವೀಕ್ಷಣೆಯಂತಹ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶವಿದೆ. ಆದರೆ, ಖಾಸಗಿ ಕಾರ್ಯಕ್ರಮಗಳಿಗೆ ಇಲ್ಲಿ ಅವಕಾಶವಿದೆಯೇ? ಎಂಬ ಪ್ರಶ್ನೆಗೆ `2 ಸಾವಿರ ರೂ ಪಾವತಿಸಿದರೆ ಖಾಸಗಿ ಕಾರ್ಯಕ್ರಮಕ್ಕೆ ಸಭಾಂಗಣ ಲಭ್ಯ’ ಎಂಬ ಉತ್ತರ ಬರುತ್ತದೆ.
ಜುಲೈ 26ರಂದು ಸರ್ಕಾರಿ ಸೇವೆಯಲ್ಲಿರುವ ರೋಜನ ಭುಜಲೆ ಅವರ ಪುತ್ರ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅದು ತಮ್ಮ ತಂದೆ ಕೆಲಸ ಮಾಡುವ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನೇ ಅವರು ಬಳಸಿಕೊಂಡಿದ್ದಾರೆ. ವಿಜ್ಞಾನ ಚಟುವಟಿಕೆಗೆ ಮೀಸಲಿರುವ ಈ ಕೇಂದ್ರದಲ್ಲಿ ಖಾಸಗಿ ಕಾರ್ಯಕ್ರಮಕ್ಕೂ ಅವಕಾಶ ನೀಡಿದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದು, ಷರತ್ತುಗಳಿಗೆ ಒಳಪಟ್ಟು ಈ ಕೇಂದ್ರದಲ್ಲಿ ಖಾಸಗಿ ಕಾರ್ಯಕ್ರಮ ಆಯೋಜಿಸುವ ಅವಕಾಶವಿದೆ ಎಂದು ಸ್ವತಃ ಕೇಂದ್ರದ ಮುಖ್ಯಸ್ಥರಾಗಿರುವ ರೋಜನ ಭುಜಲೆ ಅವರು ಸ್ಪಷ್ಟೀಕರಣ ನೀಡಿದ್ದಾರೆ.
`ಕಾರವಾರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣವನ್ನು ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಸ್ವಯಂಸೇವಾ ಸಂಘಗಳು ಹಾಗೂ ಸಾರ್ವಜನಿಕರು ನಿಗಧಿತ ಷರತ್ತುಗಳು ಮತ್ತು ನಿಯಮಾವಳಿಗಳಿಗೆ ಒಳಪಟ್ಟು ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳುವ ಅವಕಾಶವನ್ನು ಕೇಂದ್ರದ ಆರಂಭದಿoದಲೂ ಕಲ್ಪಿಸಲಾಗಿದೆ. ಸಭಾಂಗಣದ ಬಳಕೆಗೆ 2,000ರೂ ನಿಗದಿ ಮಾಡಲಾಗಿದ್ದು, ಅದನ್ನು ಆಡಳಿತ ಮಂಡಳಿ ಸಭೆ ಅನುಮೋದಿಸಿದೆ’ ಎಂದವರು ಹೇಳಿದ್ದಾರೆ.
`ಈ ಸಭಾಂಗಣವನ್ನು ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ತರಬೇತಿ ಕಾರ್ಯಕ್ರಮಗಳು, ಶೈಕ್ಷಣಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳು, ಸಮುದಾಯ ಸಭೆಗಳು, ಸನ್ಮಾನ ಸಮಾರಂಭಗಳು, ಪದವಿ ಪ್ರದಾನ ಸಮಾರಂಭಗಳು, ಜನ್ಮದಿನ ಆಚರಣೆಗಳು ಹಾಗೂ ವಿಜ್ಞಾನ ಕೇಂದ್ರದ ಉದ್ದೇಶಗಳಿಗೆ ಧಕ್ಕೆ ಉಂಟುಮಾಡದ ಇತರೆ ಸೂಕ್ತ ಕಾರ್ಯಕ್ರಮಗಳಿಗಾಗಿ ನಿಗದಿತ ನಿಯಮಾವಳಿಗಳಿಗೆ ಅನುಗುಣವಾಗಿ ಬಾಡಿಗೆಗೆ ನೀಡಲಾಗುತ್ತದೆ. ಯಾವುದೇ ಆಸಕ್ತರು ಸಭಾಂಗಣದ ಲಭ್ಯತೆ ಹಾಗೂ ನಿಗಧಿತ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಇದನ್ನು ಪಾಡಿಗೆಗೆಪಡೆಯಬಹುದು’ ಎಂದವರು ಹೇಳಿದ್ದಾರೆ.
`2002ರಲ್ಲಿ ಇಲ್ಲಿ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ಶುರುವಾಗಿತ್ತು. 2016ರಲ್ಲಿ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಈ ಕಟ್ಟಡದಿಂದ ಬಿಡಿಸಿದ್ದು, ಅದು ಇದೀಗ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಉಪಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೂ ಹಾಗೂ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರಕ್ಕೂ ಯಾವುದೇ ಸಂಬoಧವಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ವಿಜ್ಞಾನಿ ವಿ ಎನ್ ನಾಯಕ ಅವರು ಹೇಳಿದ್ದಾರೆ.