ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಹಾಗೂ ಸಾಮಗ್ರಿ ಉತ್ಪಾದನೆಯಲ್ಲಿ ಸಾಧನೆ ಮಾಡಿರುವ ಯುವ ಉದ್ಯಮಿ ಸಿದ್ಧಾರ್ಥ ನಾಯ್ಕ ಅವರಿಗೆ Emerging Company of the Year Award for Business Excellence ಪ್ರಶಸ್ತಿ ಸಿಕ್ಕಿದೆ. ಅಚೀವರ್ಸ್ ಕಾನ್ಫರೆನ್ಸ್’ನವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಿದ್ಧಾರ್ಥ ನಾಯ್ಕ ಅವರು ಕಾರವಾರದಲ್ಲಿ ಡಾಲ್ಫಿನ್ ಕನ್ಸ್ಟ್ರಕ್ಷನ್ಸ್ & ಇಂಡಸ್ಟ್ರೀಸ್ ಸಂಸ್ಥೆ ಕಟ್ಟಿದ್ದಾರೆ. ಆ ಸಂಸ್ಥೆಯ ಮೂಲಕ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಹಾಗೂ ಪರಿಸರ ಸ್ನೇಹಿ ಕಟ್ಟಡಕ್ಕೆ ಬೇಕಿರುವ ಸಾಮಗ್ರಿಗಳ ಉತ್ಪಾದನೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಸಾಧನೆ ನೋಡಿದ ಇಂಟರ್ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್’ನವರು ರಾಷ್ಟ್ರೀಯ ಪ್ರಶಸ್ತಿ ನೀಡಿದ್ದಾರೆ.
ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನ ಗುಲ್ಮೋಹರ್ ಸಭಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ನಾಯ್ಕ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ರಾಮದಾಸ್ ಅಠಾವಳೆ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್, ಸಂಸದ ಕೆ ಸಿ ತ್ಯಾಗಿ, ಜೆ.ಕೆ. ಜೈನ್ ಹಾಗೂ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಸಂಗ್ರಾಮ್ ಪಟ್ನಾಯಕ್ ಸೇರಿದಂತೆ ಅನೇಕ ಗಣ್ಯರು ಈ ಪ್ರಶಸ್ತಿ ವಿತರಿಸಿ, ಅಭಿನಂದಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಿದ್ಧಾರ್ಥ ನಾಯ್ಕ ಅವರು `ಪರಿಸರ ಸ್ನೇಹಿ ಕ್ಷೇತ್ರದಲ್ಲಿ ಗುಣಮಟ್ಟದ ನಿರ್ಮಾಣ ಕಾಮಗಾರಿ ನಡೆಸಿದ ಕಾರಣ ಈ ಗೌರವ ಸಿಕ್ಕಿದೆ. ಈ ಪ್ರಶಸ್ತಿಯಿಂದ ತಮ್ಮ ವಿಶ್ವಾಸ ಹೆಚ್ಚಾಗಿದೆ’ ಎಂದು ಹೇಳಿದ್ದಾರೆ. ಸಿದ್ಧಾರ್ಥ ನಾಯ್ಕ ಅವರು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಪುತ್ರರಾಗಿದ್ದಾರೆ.