ಸಾವನಪ್ಪಿದ ರೋಗಿಯ ಶವವನ್ನು ಸಂಬoಧಿಕರಿಗೆ ಹಸ್ತಾಂತರಿಸಲು ಕಿಮ್ಸ್ ಅನಗತ್ಯವಾಗಿ ಕಾಡಿಸಿದ್ದು, ಇದರಿಂದ ಕಂಗಾಲಾದ ಕುಟುಂಬದವರು ಶವಾಗಾರದ ಬಳಿಯೇ ಪ್ರತಿಭಟನೆ ನಡೆಸಿದ್ದಾರೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಮನವಿ ಮಾಡಿದರೂ ಶವ ಕೊಡದ ಕಾರಣ ಅವರು ಆಸ್ಪತ್ರೆ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಜೋಯಿಡಾದ ಗೋವಿಂದ್ ನಾಯ್ಕ (60) ಎಂಬಾತರು ಕಾರವಾರ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಜುಲೈ 23ರಂದು ಸಾವನಪ್ಪಿದರು. ಜೊಯಿಡಾದಿಂದ ಪೊಲೀಸರು ಬರುವವರೆಗೆ ಶವ ಕೊಡುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಪಟ್ಟು ಹಿಡಿದಿದ್ದರು. ಸಹಜ ಸಾವಾಗಿರುವ ಕಾರಣ ಶವ ಕೊಡುವಂತೆ ಕುಟುಂಬದವರು ಎಷ್ಟೇ ಕೇಳಿಕೊಂಡರೂ ಆಸ್ಪತ್ರೆಯವರು ಅದಕ್ಕೆ ಸಿದ್ಧವಿರಲಿಲ್ಲ. ಈ ವಿಷಯ ಅರಿತು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಕಿಮ್ಸ್ ನಿರ್ದೇಶಕಿ ಡಾ ಪೂರ್ಣಿಮಾ ಅವರಿಗೆ ಫೋನ್ ಮಾಡಿದರು. ಶವ ಹಸ್ತಾಂತರಕ್ಕೆ ಮನವಿ ಮಾಡಿದರೂ ಮರು ದಿನವೂ ಶವ ಬಿಟ್ಟು ಕೊಟ್ಟಿರಲಿಲ್ಲ.
ಅನಗತ್ಯವಾಗಿ ಪೊಲೀಸ್ ದಾಖಲೆಗಳಲ್ಲಿ ಎಂಎಲ್ಸಿ ದಾಖಲಿಸಿ ದೂರದ ಗ್ರಾಮಗಳಿಂದ ಬಂದಿದ್ದ ಮೃತರ ಕುಟುಂಬಸ್ಥರಿಗೆ ಆಸ್ಪತ್ರೆಯವರು ಅಲೆದಾಡಿಸಿದ್ದರು. ಹೀಗಾಗಿ ಕುಟುಂಬದವರು ಆಕ್ಷೇಪವ್ಯಕ್ತಪಡಿಸಿ ಪ್ರತಿಭಟಿಸಿದ್ದು, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎದುರು ಉಪತಹಸೀಲ್ದಾರ್ ಅವರ ಮೂಲಕ ಮಾಧವ ನಾಯಕ ಅವರು ಮಾನವ ಹಕ್ಕು ಆಯೋಗಕ್ಕೆ ದೂರು ರವಾನಿಸಿದರು. ಸುರಜ್ ಕುರಮಕರ, ರಾಮಾ ನಾಯ್ಕ ಅವರು ಸಹ ಆಸ್ಪತ್ರೆ ವಿರುದ್ಧ ಅಸಮಧಾನವ್ಯಕ್ತಪಡಿಸಿದರು.