ಒಂದುವರೆ ಲಕ್ಷ ರೂ ಬೆಳೆ ಸಾಲ ತೀರಿಸಲಾಗದ ಕಾರಣ ಮುಂಡಗೋಡಿನ ಹನುಮಂತ ಭದ್ರಾಪುರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ.
ಮುಂಡಗೋಡದ ಚಡವಳ್ಳಿಯಲ್ಲಿ ಹನುಮಂತ ಯಲ್ಲಪ್ಪ ಭದ್ರಾಪುರ (30) ಅವರು ವಾಸವಾಗಿದ್ದರು. ಅವರ ತಾಯಿ ಸೋಮಕ್ಕ ಭದ್ರಾಪುರ ಅವರ ಹೆಸರಿನಲ್ಲಿರುವ ಭೂಮಿ ಅಭಿವೃದ್ಧಿಗೆ ಸಾಲ ಮಾಡಿದ್ದರು. ಕೆರವಳ್ಳಿ ಗ್ರಾಮದಲ್ಲಿ 5 ಎಕರೆ ಭೂಮಿಯಲ್ಲಿ ಅವರು ವಿವಿಧ ಕೃಷಿ ಚಟುವಟಿಕೆ ನಡೆಸಿದ್ದರು. ಇದಕ್ಕಾಗಿ ಚಡವಳ್ಳಿ-ಮಲವಳ್ಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ ಅವರು 149000ರೂ ಬೆಳೆಸಾಲವನ್ನುಪಡೆದಿದ್ದರು. ಆದರೆ, ಮಳೆ ಬಾರದ ಕಾರಣ ಬೆಳೆ ಸರಿಯಾಗಿ ಆಗಲಿಲ್ಲ. ಬೋರ್ ಕೊರೆಸಿದರೂ ಅಲ್ಲಿ ನೀರು ಬರಲಿಲ್ಲ.
ಮಳೆ-ಬೆಳೆ ಇಲ್ಲದ ಕಾರಣ ಬೆಳೆ ಸಾಲ ತೀರಿಸಲು ಸಹ ಹನುಮಂತ ಭದ್ರಾಪುರ ಅವರಿಂದ ಸಾಧ್ಯವಾಗಲಿಲ್ಲ. ಅದೇ ನೋವಿನಲ್ಲಿದ್ದ ಅವರು ಜುಲೈ 17ರಂದು ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದರು. ಅಸ್ವಸ್ಥರಾದ ಅವರನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ನಂತರ ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಜುಲೈ 20ರಂದು ಅವರು ಸಾವನಪ್ಪಿದರು. ಅಣ್ಣನ ಸಾವಿನ ಬಗ್ಗೆ ರವಿ ಭದ್ರಾಪುರ ಅವರು ಪೊಲೀಸರಿಗೆ ಮಾಹಿತಿ ನೀಡಿದರು.