`ವಿದ್ಯಾರ್ಥಿಗಳಿಗೆ ಶಿಸ್ತು, ನಾಯಕತ್ವ ಗುಣ, ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆ ಕೌಶಲ್ಯ, ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್ ಹಾಗೂ ಗೈಡ್ಸ್ ಸಹಕಾರಿ’ ಎಂದು ಕಾರವಾರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಠೋಬಾ ನಾಯ್ಕ ಅವರು ಹೇಳಿದ್ದಾರೆ.
ಅವರು ಕಾರವಾರ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಯೋಜಿಸಿದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, `ಪ್ರಸ್ತುತ ವರ್ಷದಲ್ಲಿ ತಾಲೂಕಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪುರಸ್ಕಾರ ಪಡೆಯಲು ಶ್ರಮಿಸಬೇಲಿ’ ಎಂದು ಕರೆ ನೀಡಿದ್ದಾರೆ. `ಸ್ಕೌಟ್ಸ್ ಮತ್ತು ಗೈಡ್ಸ್ ಮೂಲಕ ಶಿಸ್ತು, ನಾಯಕತ್ವ, ಆತ್ಮವಿಶ್ವಾಸ, ಕೌಶಲ್ಯ, ಸೇವಾ ಮನೋಭಾವ, ದೇಶಭಕ್ತಿ ಜಾಗೃತಿ ಸಾಧ್ಯವಿದೆ. ಪ್ರಾಮಾಣಿಕತೆ, ಸಹಾಯ ಮಾಡುವ ಗುಣ ಜೊತೆಗೆ ಪ್ರಕೃತಿ ಪ್ರೀತಿಯನ್ನು ಕಲಿಸುತ್ತದೆ’ ಎಂದವರು ಅಭಿಪ್ರಾಯಪಟ್ಟರು.
ಉತ್ತರಕನ್ನಡ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಜಿ ಜಿ ಸಭಾಹಿತ ಮಾತನಾಡಿ, `ಜಿಲ್ಲೆಯ ತರಬೇತಿ ಕೇಂದ್ರವನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು. ಆ ನಿಟ್ಟಿನಲ್ಲಿ ನಾವೆಲ್ಲರು ಶ್ರಮಿಸೋಣ’ ಎಂದರು. ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಪಕಿ ಅಂಜಲಿ ಮಾನೆ ಅವರು `ಮಕ್ಕಳಿಗೆ ಶಿಸ್ತು ಮತ್ತು ಸಂಯಮಶೀಲತೆ ಸ್ಕೌಟ್ಸನಿಂದ ಬರುತ್ತದೆ’ ಎಂದರು. ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಛಾಯಾ ಜಾವಕರ ವಹಿಸಿದ್ದು. `ಸಂಸ್ಥೆ ಬೆಳೆಯಬೇಕು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ತರಬೇತಿಗಳ ಅವಶ್ಯಕತೆಯಿರುತ್ತದೆ’ ಎಂದು ಹೇಳಿದರು.
ವೇದಿಕೆಯ ಮೇಲೆ ಕಾರ್ಯದರ್ಶಿ ರಾಜು ಹೆಬ್ಬಾರ, ಕೋಶಾಧಿಕಾರಿ ಜಿ ಆರ್ ಮಡಿವಾಳ ಮತ್ತು ಎಸ್ ಓ ಸಿ ಭಾರತಿ ಡಯಾಸ್, ಎಲ್ ಟಿ ಬಿ ಡಿ ಫರ್ನಾಂಡೀಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ, ನಿರೂಪಿಸಿದರು.