ಸಿದ್ದಾಪುರದ ಸುಮಿತ್ರಾ ನಾಯ್ಕ ಹಾಗೂ ಗಣಿಕೊಪ್ಪದ ರವಿ ನಾಯ್ಕ ಅವರು ಐದು ವರ್ಷದಿಂದ ಪ್ರೀತಿಸುತ್ತಿದ್ದು, ಸದ್ಯ ಅವರ ಪ್ರೀತಿ ಮುದಿರು ಬಿದ್ದಿದೆ. ಪ್ರೀತಿ ಮುರಿದ ಸುಮಿತ್ರಾ ನಾಯ್ಕ ಅವರಿಗೆ ರವಿ ನಾಯ್ಕ ಅವರು ಕೆನ್ನೆಗೆ ಬಾರಿಸಿದ್ದಾರೆ. ಜೊತೆಗೆ ಅವರ ಮನೆಗೆ ನುಗ್ಗಿ ಕತ್ತಿ ತೋರಿಸಿದ್ದಾರೆ.
ಸಿದ್ದಾಪುರ ಸೋವಿನಕೊಪ್ಪ ಬಳಿಯ ಹಾವಿನಬೈಲಿನಲ್ಲಿ ಸುಮಿತ್ರಾ ನಾರಾಯಣ ನಾಯ್ಕ (22) ಅವರು ವಾಸವಾಗಿದ್ದಾರೆ. ಸದ್ಯ ಶಿರಸಿಯ ಊರತೋಟ ತಾರಿಹಳ್ಳಿಯಲ್ಲಿ ಅವರು ವಾಸಿಸುತ್ತಿದ್ದಾರೆ. ಸಿದ್ದಾಪುರ ಗಣಿಕೊಪ್ಪದ ರವಿ ಮಂಜುನಾಥ ನಾಯ್ಕ (24) ಅವರು ಸುಮಿತ್ರಾ ನಾಯ್ಕ ಅವರಲ್ಲಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದು, ಅದನ್ನು ಸುಮಿತ್ರಾ ನಾಯ್ಕ ಅವರು ಮನ್ನಿಸಿದ್ದಾರೆ. ಕಳೆದ ಐದು ವರ್ಷದಿಂದ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಈಚೆಗೆ ರವಿ ನಾಯ್ಕ ಅವರ ವರ್ತನೆ ಬದಲಾಗಿದೆ. ಇದರಿಂದ ಬೇಸತ್ತ ಸುಮಿತ್ರಾ ನಾಯ್ಕ ಅವರು ಆ ಪ್ರೀತಿಯಿಂದ ದೂರವಾಗಿದ್ದಾರೆ.
ಕಳೆದ ಒಂದು ವರ್ಷದಿಂದ ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಸರಾಯಿ ಕುಡಿದು ಬರುವ ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. `ತನ್ನೊಂದಿಗೆ ತಿರುಗಾಟಕ್ಕೆ ಬಾ’ ಎಂದು ಒತ್ತಾಯ ಮಾಡಿದ್ದಾರೆ. ಜೊತೆಗೆ ಅನಗತ್ಯ ಸಂಶಯಪಡುತ್ತಿದ್ದಾರೆ. ಇದರಿಂದ ಸುಮಿತ್ರಾ ನಾಯ್ಕ ಅವರು ರವಿ ನಾಯ್ಕ ಅವರಿಂದ ದೂರವಾಗಿದ್ದಾರೆ. ಅದಾಗಿಯೂ, ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರನ್ನು ಹಿಂಬಾಲಿಸುವುದು ಹಾಗೂ ಭೇಟಿ ಆಗುವಂತೆ ಪೀಡಿಸುವುದನ್ನು ಬಿಟ್ಟಿಲ್ಲ. ಪ್ರೀತಿಸದೇ ಇದ್ದರೆ ಮನೆಯವರಿಗೆ ಸಮಸ್ಯೆ ಮಾಡುವೆ’ ಎಂದು ಸಹ ರವಿ ನಾಯ್ಕ ಅವರು ಬೆದರಿಸಿದ್ದಾರೆ.
ಈ ಎಲ್ಲದರ ನಡುವೆ ಜುಲೈ 8ರಂದು ಶಿರಸಿಯ ಗೋಳಿ ಕ್ರಾಸಿನ ಬಳಿ ಬರುವಂತೆ ರವಿ ನಾಯ್ಕ ಅವರು ಸುಮಿತ್ರಾ ಅವರಿಗೆ ಹೇಳಿದ್ದಾರೆ. ಮೊಬೈಲ್ ಸಿಮ್ ಕೊಡುವುದಾಗಿ ಅವರು ಹೇಳಿದ್ದು, ಸುಮಿತ್ರಾ ನಾಯ್ಕ ಅವರು ಅಲ್ಲಿಗೆ ಹೋಗಿದ್ದಾರೆ. ಪರಿಚಯಸ್ಥರ ಬೈಕ್ ಮೂಲಕ ಸುಮಿತ್ರಾ ನಾಯ್ಕ ಅವರು ಅಲ್ಲಿಗೆ ಹೋಗಿದ್ದು, ಬೈಕ್ ಮೇಲೆ ತಂದು ಬಿಟ್ಟವರನ್ನು ರವಿ ನಾಯ್ಕ ಅವರು ಅನುಮಾನಿಸಿದ್ದಾರೆ. ರಸ್ತೆ ಬದಿಯಲ್ಲಿಯೇ ಜೋರು ಜಗಳ ಮಾಡಿದ ರವಿ ನಾಯ್ಕ ಅವರು ಸುಮಿತ್ರಾ ನಾಯ್ಕ ಅವರ ಕೆನ್ನೆಗೆ ಬಾರಿಸಿದ್ದಾರೆ. ಮರುದಿನವೂ ತಾರಿಹಳ್ಳಿಯಲ್ಲಿರುವ ಸುಮಿತ್ರಾ ನಾಯ್ಕ ಅವರ ಮನೆಗೆ ನುಗ್ಗಿ ರಂಪಾಟ ಮಾಡಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಕೂಗಿದ ಅವರನ್ನು ನೋಡಿದ ಮಂಜುನಾಥ ನಾಯ್ಕ ಅವರು ತಡೆಯಲು ಬಂದಿದ್ದು, ಅವರಿಗೂ ರವಿ ನಾಯ್ಕ ಅವರು ಬೆದರಿಕೆ ಹಾಕಿದ್ದಾರೆ.