ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಆಕಾಂಕ್ಷಿಯಾಗಿದ್ದಾರೆ. ಆದರೆ, `ಈ ಹುದ್ದೆಗಾಗಿ ಲಾಭಿ ಮಾಡುವುದಿಲ್ಲ’ ಎಂದವರು ಹೇಳಿಕೆ ನೀಡಿದ್ದಾರೆ.
ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರ ಹುಡುಕಾಟ ನಡೆದಿದೆ. ಇದಕ್ಕಾಗಿ ಪಕ್ಷವೂ ಜುಲೈ 25ರಿಂದ 31ರವರೆಗೆ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಸಂಘಟನೆಯ ಉದ್ದೇಶದಿಂದ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಆಸಕ್ತಿವಹಿಸಿದೆ. ಈ ಅಧ್ಯಕ್ಷ ಸ್ಥಾನದ ಮೇಲೆ ರವೀಂದ್ರ ನಾಯ್ಕ ಅವರು ಕಣ್ಣಿಟ್ಟಿದ್ದಾರೆ. ಆದರೆ, `ಈ ಹುದ್ದೆಗಾಗಿ ಸ್ಪರ್ಧೆ ಮಾಡುವುದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ’ ಎಂದು ಸಹ ಅವರು ಹೇಳಿದ್ದಾರೆ. `ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ’ ಎಂದವರು ಪಕ್ಷದವರಲ್ಲಿ ಹೇಳಿಕೊಂಡಿದ್ದಾರೆ.
`ಈ ಹಿಂದೆ ಅನೇಕ ಬಾರಿ ವಿಧಾನಸಭೆ-ಸ್ಥಳೀಯ ಸಂಸ್ಥೆ, ವಿಧಾನ ಪರಿಷತ್ ಹಾಗೂ ಲೋಕಸಭಾ ಚುನಾವಣೆಯ ಅಭ್ಯರ್ಥಿ ಸ್ಥಾನಕ್ಕೆ ಅಪೇಕ್ಷಿಸಿದ್ದೆ. 1990ರಲ್ಲಿ ವಿದ್ಯಾರ್ಥಿ ಕಾಂಗ್ರೇಸ್, ನಂತರ ಯುವ ಕಾಂಗ್ರೆಸ್, ಹಿಂದುಳಿದ ಘಟಕ, ಕಾನೂನು ಘಟಕದಲ್ಲಿ ಕೆಲಸ ಮಾಡಿದ್ದು ಸದ್ಯ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ನನ್ನ ಈ ಕೆಲಸ ಗುರುತಿಸಿ ಪಕ್ಷ ಅವಕಾಶ ನೀಡಿದರೆ ಜಿಲ್ಲಾಧ್ಯಕ್ಷ ಸ್ಥಾನ ನಿಭಾಯಿಸಲು ಬದ್ಧ’ ಎಂದವರು ಹೇಳಿದ್ದಾರೆ.