`ಭಾಗಾಯತ ಭೂಮಿಯ ಅನುಕೂಲಕ್ಕೆ ಬಿಟ್ಟಿರುವ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿ ಹಸ್ತಕ್ಷೇಪ ನಡೆಸಲು ಅರಣ್ಯ ಅಧಿಕಾರಿಗಳಿಗೆ ಹಕ್ಕಿಲ್ಲ. ಸೊಪ್ಪಿನ ಬೆಟ್ಟದ ಆಡಳಿತಾತ್ಮಕ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಒಳಪಡುವುದಿಲ್ಲ. ಅದಾಗಿಯೂ, ಕಾನೂನು ಮೀರಿ ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.
`ಭಾಗಾಯತಿಗೆ ಬಿಟ್ಟಂತ ಬೆಟ್ಟದಲ್ಲಿ ಸಾಗುವಳಿದಾರರಿಗೆ ಮತ್ತು ವಾಸ್ತವ್ಯಕ್ಕೆ ಮಾಡಿಕೊಂಡ ಅತಿಕ್ರಮಣದಾರರ ಚಟುವಟಿಕೆಗೆ ಕೆಲ ಅರಣ್ಯ ಅಧಿಕಾರಿ-ಸಿಬ್ಬಂದಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಅವರು ಅಧಿಕಾರ ಚಲಾಯಿಸುವ ಹಾಗಿಲ್ಲ. ಅರಣ್ಯ ಇಲಾಖೆ ಸರ್ಕಾರದ ಭಾಗ ಮಾತ್ರವಾಗಿದ್ದು, ಬೆಟ್ಟದ ಆಡಳಿತಾತ್ಮಕ ನಿಯಂತ್ರಣ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ’ ಎಂದವರು ವಿವರಿಸಿದ್ದಾರೆ. ಶಿರಸಿ ರಾಜೀವನಗರದಲ್ಲಿ ಬೆಟ್ಟ ಅತಿಕ್ರಮಣದಾರರ ಸಭೆ ನಡೆಸಿದ ಅವರು ಕಾನೂನು ಅರಿವು ನೀಡಿದ್ದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
`ಕಂದಾಯ ಇಲಾಖೆ ಮಾಲಕತ್ವದ ಬೆಟ್ಟ ಕ್ಷೇತ್ರದಲ್ಲಿ ಅರಣ್ಯ ಕಾಯಿದೆ ಅಡಿ ಮರಗಳ ರಕ್ಷಣೆ ಹಾಗೂ ಪಾಲನೆಗೆ ಅವಕಾಶವಿದೆ. ಆದರೆ, ಬೆಟ್ಟ ಕ್ಷೇತ್ರದ ಭೂಮಿಯ ಮೇಲಿನ ಹಕ್ಕಿಗೆ ಬೆಟ್ಟ ಬಳಕೆದಾರರು ಹಾಗೂ ಅತಿಕ್ರಮಣದಾರರನ್ನು ಪ್ರಶ್ನಿಸಲು ಅರಣ್ಯ ಇಲಾಖೆಗೆ ಅಧಿಕಾರವಿಲ್ಲ. ಬೆಟ್ಟವೂ ಭಾಗಾಯಿತದ ಅವಿಭಾಜ್ಯ ಅಂಗವಾಗಿದ್ದು, ಬೆಟ್ಟದ ಮಾಲೀಕತ್ವವೂ ವಯಕ್ತಿಕವಾದದ್ದಲ್ಲ’ ಎಂದವರು ವಿವರಿಸಿದ್ದಾರೆ. `ಬ್ರೀಟಿಷರು ಸರ್ವೆ ಸೆಟಲ್ಮೆಂಟ್ ಮಾಡುವಾಗ ಬೆಟ್ಟವನ್ನು ಕಂದಾಯ ಇಲಾಖೆಗೆ ಸೇರಿಸಿದ್ದಾರೆ. ಜೊತೆಗೆ ಆ ಬೆಟ್ಟವನ್ನು ಮೀಸಲು ಅರಣ್ಯದಿಂದ ಮುಕ್ತಗೊಳಿಸಿದ್ದಾರೆ. ಹೀಗಿರುವಾಗ ಬೆಟ್ಟ ಕ್ಷೇತ್ರವನ್ನು ಅರಣ್ಯ ಇಲಾಖೆ ತಮ್ಮದು ಎಂಬ ರೀತಿ ವರ್ತಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
`ಬೆಟ್ಟವೇ ಆಗಲಿ-ಅರಣ್ಯ ಆಗಲಿ, ಹೊಸ ಅತಿಕ್ರಮಣಕ್ಕೆ ಅವಕಾಶ ಕೊಡದಂತೆ ತಡೆಯುವುದು ಅರಣ್ಯಾಧಿಕಾರಿಗಳ ಕೆಲಸ. ಹೀಗಾಗಿ ಸಾಗುವಳಿ ಮತ್ತು ವಾಸ್ತವ್ಯ ಮಾಡುವ ಅತಿಕ್ರಮಣದಾರರು ಕಾನೂನು ಭದ್ದ ಭೂಮಿ ಹಕ್ಕಿನ ಕುರಿತು ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಚಿಂತಿಸಬೇಕು’ ಎಂದವರು ಕರೆ ನೀಡಿದರು. ಶಿರಸಿ ನಗರ ಸಭೆಯ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಮಾತನಾಡಿ, `ಬೆಟ್ಟ ಅತಿಕ್ರಮಣದಾರರ ಸಮಸ್ಯೆಗಳ ಕುರಿತು ಸಂಘಟನಾತ್ಮಕ ಹೋರಾಟ ಜರುಗಬೇಕು’ ಎಂದರು. ಕಿರಣ ನಾಯ್ಕ, ರಘು ಕಾನಡೆ ಜಭ್ಬಾರ್ ಶೇಕ್, ರಾಜು ನಾಯ್ಕ ಮಾತನಾಡಿದರು. ಮಗದಲೀನ್ ಲೋಪೀಸ್, ಮಂಜುಳಾ ಅನಾಬಳಗ, ಚಂದ್ರು ನಾಯ್ಕ, ಬಾಬು ಅನದಳಗಿ, ಮೈಲಕ ಗೋನ್ಸಾಲೀನ್, ನಾಗರಾಜ ಮಡಿವಾಳ, ಶಾರದ ನಾಯ್ಕ, ಪುಂಡಲೀಕ್ ಬಗವೆ, ನೂರಹ್ಮದ್ ಬೆಣ್ಣೆ, ಶಂಕರ ನಾಯ್ಕ, ವಿನೋದ ಗಡಕರ, ಜೋನ್ ಫರ್ನಾಂಡಿಸ್ , ಸಂಜಯ್ ಶಿರೋಡಕರ್ ಮುಂತಾದವರು ಅಭಿಪ್ರಾಯವ್ಯಕ್ತಪಡಿಸಿದರು. ಉಮೇಶ ಪಟಗಾರ ವಂದಿಸಿದರು.