ಉತ್ತರ ಕನ್ನಡ ಜಿಲ್ಲೆಯಲ್ಲಿ ಜೋರು ಮಳೆಯಾದರೆ ಅನೇಕ ಗ್ರಾಮಗಳು ಜಲಾವೃತಗೊಳ್ಳುತ್ತದೆ. ಭೂ ಕುಸಿತ ಹಾಗೂ ಪ್ರವಾಹ ಎದುರಾದರೆ 205 ಗ್ರಾಮದ ಜನ ತತ್ತರಿಸಲಿದ್ದು, ಅಂದಾಜು 1.50 ಲಕ್ಷ ಜನ ಸಮಸ್ಯೆಗೆ ಸಿಲುಕಲಿದ್ದಾರೆ.
ಧಾರಾಕಾರ ಮಳೆ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹಿರಿಮೆ ಹೊಸಕುಳಿ ಬಳಿ ದೊಡ್ಡಹಿತ್ತಲ ಎಂಬ ಗ್ರಾಮ ಜಲಾವೃತಗೊಂಡಿದೆ. ಅದರಿಂದ ಶವ ಸಾಗಿಸುವುದಕ್ಕೂ ಸಹ ಜನ ಸಮಸ್ಯೆ ಅನುಭವಿಸಿದನ್ನು ವಿವಿಧ ಮಾಧ್ಯಮಗಳು ವರದಿ ಮಾಡಿದೆ. 50ಕ್ಕೂ ಅಧಿಕ ಮನೆಗಳಿರುವ ಪ್ರದೇಶದ ಜನ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅನೇಕರು ಮರುಕವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೆ ಪ್ರವಾಹ ಹಾಗೂ ಭೂ ಕುಸಿತದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಬಹುದಾದ ಅನಾಹುತಗಳ ಪಟ್ಟಿ Mobile Media Network’ಗೆ ಸಿಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ 228 ಗ್ರಾಮ ಪಂಚಾಯತಗಳ ಪೈಕಿ 97 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭೂ ಕುಸಿತ ಹಾಗೂ ಪ್ರವಾಹದಿಂದ ಸಮಸ್ಯೆಗೆ ಸಿಲುಕುವ ಪ್ರದೇಶಗಳಿವೆ. ಅಂಕೋಲಾದಲ್ಲಿ 23, ಭಟ್ಕಳದಲ್ಲಿ 42, ಹಳಿಯಾಳದಲ್ಲಿ 7, ಹೊನ್ನಾವರದಲ್ಲಿ 54, ಕಾರವಾರದಲ್ಲಿ 27, ಕುಮಟಾದಲ್ಲಿ 33, ಸಿದ್ದಾಪುರದಲ್ಲಿ 1, ಶಿರಸಿಯಲ್ಲಿ 13 ಹಾಗೂ ಯಲ್ಲಾಪುರದಲ್ಲಿ 4 ಊರುಗಳು ಪ್ರವಾಹ ಹಾಗೂ ಭೂ ಕುಸಿತ ಪ್ರದೇಶವನ್ನು ಹೊಂದಿದೆ. ಇಲ್ಲಿ ಸಂಕಷ್ಟ ಅನುಭವಿಸುವವರ ರಕ್ಷಣೆಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ದಾಖಲೆಗಳ ಪ್ರಕಾರ ಸುಮಾರು 152727 ಜನರಿಗೆ ಸಮಸ್ಯೆ ಆಗಲಿದ್ದು, ಅವರಿಗೆ ತುರ್ತು ನೆರವು ನೀಡುವುದಕ್ಕಾಗಿ 294 ಕಾಳಜಿ ಕೇಂದ್ರಗಳನ್ನು ಸಹ ತೆರೆಯಲಾಗಿದೆ. ಜನರಿಗೆ ಮಾತ್ರವಲ್ಲದೇ ಜಾನುವಾರು ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಜಾನುವಾರುಗಳ ಆರೈಕೆಗಾಗಿ 107 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಸರ್ಕಾರಕ್ಕೆ ಸಲ್ಲಿಕೆಯಾದ ಅಂಕಿ-ಅAಶಗಳ ಪ್ರಕಾರ ಕಾರವಾರದಲ್ಲಿ ಅತಿ ಹೆಚ್ಚು ಜನ ಭೂ ಕುಸಿತ ಹಾಗೂ ಪ್ರವಾಹದಿಂದ ಸಮಸ್ಯೆಗೆ ಸಿಲುಕಲಿದ್ದಾರೆ. ಕಾರವಾರದಲ್ಲಿ 53157 ಹಾಗೂ ಹೊನ್ನಾವರದಲ್ಲಿ 38850 ಜನರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಕಾಳಜಿ ಕೇಂದ್ರ ಸಿದ್ಧಪಡಿಸಿದೆ. ಈ ಹಿಂದಿನ ಅನುಭವ ಹಾಗೂ ದಾಖಲೆಗಳ ಆಧಾರದಲ್ಲಿ ಭಟ್ಕಳದಲ್ಲಿ 31279, ಕುಮಟಾದಲ್ಲಿ 5652, ಅಂಕೋಲಾದಲ್ಲಿ 18650, ಹಳಿಯಾಳ 1750, ಶಿರಸಿಯಲ್ಲಿ 2530, ಸಿದ್ದಾಪುರದಲ್ಲಿ 24 ಹಾಗೂ ಯಲ್ಲಾಪುರದಲ್ಲಿ 835 ಜನ ಪ್ರವಾಹ ಹಾಗೂ ಭೂ ಕುಸಿತದಿಂದ ಸಮಸ್ಯೆಗೆ ಸಿಲುಕಲಿದ್ದಾರೆ. ಮುಂಡಗೋಡು, ದಾಂಡೇಲಿ ಭಾಗದಲ್ಲಿ ಪ್ರವಾಹ ಹಾಗೂ ಭೂ ಕುಸಿತದ ಅಪಾಯಗಳಿಲ್ಲ ಎಂದು ಜಿಲ್ಲಾಡಳಿತ ಪ್ರಕೃತಿ ವಿಕೋಪ ಉಸ್ತುವಾರಿ ನೋಡಿಕೊಳ್ಳುವ ಸಚಿವ ಯು ಟಿ ಖಾದರ್ ಅವರಿಗೆ ವರದಿ ಸಲ್ಲಿಸಿದೆ.
ಹೊನ್ನಾವರದ ದೊಡ್ಡಹಿತ್ತಲ ಸೇರಿ ಅನೇಕ ಕಡೆ ರಸ್ತೆ ಸಂಪರ್ಕ ಸರಿಯಾಗಿಲ್ಲ. ಅಗತ್ಯ ಸೇತುವೆ, ಕಾಲು ಸಂಕಕ್ಕೆ ಸಹ ಸರ್ಕಾರ ವ್ಯವಸ್ಥೆ ಮಾಡದ ಕಾರಣ ಜನ ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವು ಕಡೆ ಅವೈಜ್ಞಾನಿಕ ಕಾಮಗಾರಿ, ಅತಿಯಾದ ಯಂತ್ರ ಬಳಕೆಯ ದುಷ್ಪರಿಣಾಮದಿಂದ ಪ್ರವಾಹ, ಭೂ ಕುಸಿತ ಉಂಟಾಗುತ್ತಿದೆ.