ಯಲ್ಲಾಪುರ ಪಟ್ಟಣದ ಅಲಂಕಾರಕ್ಕಾಗಿ ಕೋಟ್ಯಂತರ ರೂ ವೆಚ್ಚ ಮಾಡಿ ಬೀದಿ ದೀಪಗಳ ಅಳವಡಿಕೆ ನಡೆದಿದ್ದು, ಮೂರು ವರ್ಷದೊಳಗೆ ಆ ಬೀದಿ ದೀಪಗಳು ಹಾಳಾಗಿವೆ. ರಾತ್ರಿ ವೇಳೆ ಈ ಬೀದಿ ದೀಪಗಳು ಸಮಯಕ್ಕೆ ಸರಿಯಾಗಿ ಬೆಳಗುತ್ತಿಲ್ಲ. ಹಗಲಿನಲ್ಲಿ ಅವುಗಳ ನಿರ್ವಹಣೆಯೂ ಸರಿಯಾಗಿಲ್ಲ.
2023ರಲ್ಲಿ ಯಲ್ಲಾಪುರ ಪಟ್ಟಣದಲ್ಲಿ ಬೀದಿ ದೀಪಗಳ ಅಳವಡಿಕೆ ಕಾರ್ಯ ನಡೆಸಲಾಗಿದೆ. ಆದರೆ, ಒಂದೇ ವರ್ಷದಲ್ಲಿ ಆ ಬೀದಿ ದೀಪಗಳು ನೆಲಕ್ಕೆ ಅಪ್ಪಳಿಸಿದ್ದು, ಅನೇಕ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಲೋಕೋಪಯೋಗಿ ಇಲಾಖೆ ಈ ಬೀದಿ ದೀಪ ಅಳವಡಿಕೆ ಕಾರ್ಯ ನಡೆಸಿದೆ. ಆದರೆ, ದರ ನಿರ್ವಹಣೆಯನ್ನು ಪಟ್ಟಣ ಪಂಚಾಯತಗೆ ಸೂಚಿಸಿದೆ. ಆದರೆ, ದಾಖಲೆಗಳ ಪ್ರಕಾರ ಈವರೆಗೂ ಬೀದಿ ದೀಪದ ಹಕ್ಕು ಪಟ್ಟಣ ಪಂಚಾಯತಗೆ ಹಸ್ತಾಂತರವಾಗಿಲ್ಲ. ಸದ್ಯ ಲೋಕೋಪಯೋಗಿ ಇಲಾಖೆಯವರನ್ನು ಪ್ರಶ್ನಿಸಿದರೆ ಪಟ್ಟಣ ಪಂಚಾಯತ ಕಡೆ ಹಾಗೂ ಪಟ್ಟಣ ಪಂಚಾಯತದವರನ್ನು ಪ್ರಶ್ನಿಸಿದರೆ ಲೋಕೋಪಯೋಗಿ ಇಲಾಖೆಯವರ ಕಡೆ ಬೊಟ್ಟು ತೋರಿಸುತ್ತಿದ್ದಾರೆ. ಈ ಪ್ರಾಧಿಕಾರ ಹಾಗೂ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದಾಗಿ ಆ ಬೀದಿ ದೀಪಗಳು ಅಪಾಯ ಆಹ್ವಾನಿಸುತ್ತಿದ್ದರೂ ಅದನ್ನು ಗಮನಿಸುವವರಿಲ್ಲ.
ಯಲ್ಲಾಪುರದಲ್ಲಿ ಬೀದಿ ದೀಪ ಅಳವಡಿಕೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಇನ್ನೂ ಅನೇಕ ವಾರ್ಡುಗಳಲ್ಲಿ ದೀಪಗಳ ಅಳವಡಿಕೆ ಕೆಲಸವೂ ನಡೆದಿಲ್ಲ. ಹೀಗಿರುವಾಗಲೇ ಮೊದಲು ನೆಟ್ಟ ಕಂಬಗಳು ಮುರಿದು ಬಿದ್ದಿದ್ದು, ಹಲವು ಕಡೆ ಭೂಗತ ಮಾರ್ಗವಾಗಿ ಹುಗಿದ ವಿದ್ಯುತ್ ಕೇಬಲ್’ಗಳು ಹೊರ ಬಿದ್ದಿವೆ. ಶಾಲೆ-ಅಂಗನವಾಡಿಗಳ ಬಳಿ ವಿದ್ಯುತ್ ತಂತಿಗಳು ಹೊರ ಬಿದ್ದಿದ್ದು, ರವೀಂದ್ರ ನಗರದ ಶಾಲೆಯ ಬಳಿ ವಿದ್ಯುತ್ ತಂತಿ ಹೊರಬಿದ್ದು ಅಪಾಯ ಸೃಷ್ಠಿಸಿದೆ. ಅಲ್ಲಿದ್ದ ಕಂಬ ಮುರಿದು ಬಿದ್ದು ಅದಾದ ನಂತರ ಪಿವಿಸಿ ಪೈಪ್ ಬಳಸಿ ವಿದ್ಯುತ್ ತಂತಿ ಗಂಟು ಹಾಕಲಾಗಿದೆ. ಆದರೆ, ಆ ತಂತಿಯನ್ನು ಪಾದಚಾರಿ ಮಾರ್ಗದ ಭದ್ರತೆಗೆ ಅಳವಡಿಸಿದ ಕಬ್ಬಿಣದ ಹಿಡಿಕೆಗೆ ಸ್ಪರ್ಶಿಸಲಾಗಿದೆ. ಇದರಿಂದ ಆ ಭಾಗದಲ್ಲಿ ಇನ್ನಷ್ಟು ಅಪಾಯದ ಸಾಧ್ಯತೆಗಳಿವೆ.
`ಬೀದಿ ದೀಪ ಅಳವಡಿಕೆ ಕಾಮಗಾರಿಯಲ್ಲಿ ಕೋಟ್ಯಂತರ ರೂ ಅಕ್ರಮ ನಡೆದಿದೆ. ಈ ಬಗ್ಗೆ ವಿಶೇಷ ಸಮಿತಿ ರಚಿಸಿ ತನಿಖೆ ನಡೆಸಬೇಕು. ಯಲ್ಲಾಪುರ ಪಟ್ಟಣದಲ್ಲಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಅದು ಸುಧಾರಣೆಯಾಗಬೇಕು. ಈ ಬಗ್ಗೆ ಲೋಕೋಪಯೋಗಿ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೂ ದೂರು ಕೊಡಲಾಗಿದೆ’
-ಸೋಮೇಶ್ವರ ನಾಯ್ಕ. ಮಾಜಿ ಸದಸ್ಯರು, ಪಟ್ಟಣ ಪಂಚಾಯತ, ಯಲ್ಲಾಪುರ