ಕಿರವತ್ತಿಯಿಂದ ಯಲ್ಲಾಪುರಕ್ಕೆ ನಿತ್ಯ ನೂರಾರು ಮಕ್ಕಳು ಶಾಲೆ-ಕಾಲೇಜಿಗೆ ಬರುತ್ತಿದ್ದು, ಅವರ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರಿ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ. ಹೀಗಾಗಿ ಆ ಭಾಗದಲ್ಲಿ ನಿಲುಗಡೆಯಿರುವ ಬಸ್ಸುಗಳಿಗೆ ವಿದ್ಯಾರ್ಥಿಗಳು ಜೋತಾಡಿ ಶಾಲೆ-ಕಾಲೇಜು ಸೇರುತ್ತಿದ್ದಾರೆ.
ಹುಬ್ಬಳ್ಳಿ-ಯಲ್ಲಾಪುರ ಮಾರ್ಗವಾಗಿ ಪ್ರತಿ 30 ನಿಮಿಷಕ್ಕೆ ಒಮ್ಮೆಯಂತೆ ಬಸ್ ಓಡಾಡುತ್ತದೆ. ಆದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೇ ಆ ಬಸ್ಸುಗಳು ಅಗತ್ಯವಿರುವ ಕಡೆ ನಿಲುಗಡೆ ಆಗುತ್ತಿಲ್ಲ. ಇದರಿಂದ ಪ್ರತಿ ದಿನ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತಡವಾಗಿ ಬರುತ್ತಿದ್ದು, ತರಗತಿ ತಪ್ಪುವುದನ್ನು ತಪ್ಪಿಸಿಕೊಳ್ಳಲು ಸಿಕ್ಕ ಸಿಕ್ಕ ವಾಹನವೇರಿ ಶಾಲೆ ಸೇರುತ್ತಿದ್ದಾರೆ. ಅದರಲ್ಲಿಯೂ, ಸರ್ಕಾರಿ ಬಸ್ಸುಗಳ ಬಾಗಿಲಿನಲ್ಲಿ ಜೋತಾಡುತ್ತ ಯಲ್ಲಾಪುರಕ್ಕೆ ಬರುತ್ತಿದ್ದಾರೆ.
ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದಾರೆ. `ಪ್ರಾಣವನ್ನು ಪಣಕ್ಕಿಟ್ಟು ಶಿಕ್ಷಣ ಕಲಿಯಲು ಬರುವ ಮಕ್ಕಳ ಬಗ್ಗೆ ಮುತುವರ್ಜಿವಹಿಸಿ’ ಎಂದು ಅವರು ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರಲ್ಲಿ ಮನವಿ ಮಾಡಿದ್ದಾರೆ. `ಹೀಗೆ ಮುಂದುವರೆದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕಲಿದ್ದಾರೆ. ಮಕ್ಕಳ ಸುರಕ್ಷತೆಗೆ ಒತ್ತು ನೀಡುವುದು ಅನಿವಾರ್ಯ’ ಎಂದವರು ಹೇಳಿದ್ದಾರೆ.
`ಡೊಮಗೇರಿ ಭಾಗದಲ್ಲಿ ಸಹ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಕರ್ಯವಿಲ್ಲ. ತಾವು ಅಲ್ಲಿಗೆ ಭೇಟಿ ನೀಡಿದಾಗ ವಿದ್ಯಾರ್ಥಿನಿಯೊಬ್ಬರು ಕಣ್ಣೀರು ಹಾಕಿ ಸಮಸ್ಯೆ ಹೇಳಿಕೊಂಡಿದ್ದು, ಅಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳು ಬಸ್ಸಿನ ಮೆಟ್ಟಿಲುಗಳ ಮೇಲೆ ಜೋತು ಬಿದ್ದು ಪಟ್ಟಣಕ್ಕೆ ಬರುವ ವಿಡಿಯೋವನ್ನು ಅವರು ಹಂಚಿಕೊoಡಿದ್ದಾರೆ.