ಅಡ್ಡದಾರಿಯ ಮೂಲಕವೇ ಕೋಟಿ ಕೋಟಿ ರೂ ಕಾಸು ಸಂಪಾದಿಸಿದ್ದ ಸುಲೇಮಾನ್ ಖಾನ್ ಅವರು ಗೋವಾದಲ್ಲಿ 300 ಕೋಟಿ ರೂ ಭೂ ಅಕ್ರಮ ನಡೆಸಿದ್ದು, ಕಾರವಾರದಲ್ಲಿರುವ ಅವರ ಅಪಾರ್ಟಮೆಂಟಿನ ಮೇಲೆ ಇಡಿ ದಾಳಿ ನಡೆದಿದೆ.
ಕೋಡಿಬಾಗದ ಅಬಕಾರಿ ಕಚೇರಿ ಎದುರಿನ ಅಪಾರ್ಟ್ಮೆಂಟ್’ಗೆ ನುಗ್ಗಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿನ ದಾಖಲೆಗಳ ಶೋಧ ನಡೆಸಿದ್ದಾರೆ. ಗೋವಾದಿಂದ ಆಗಮಿಸಿದ್ದ ಅಧಿಕಾರಿಗಳು ಹಲವು ಗಂಟೆಗಳ ಕಾಲ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಶೋಧಿಸಿದ್ದಾರೆ. ಸುಲೇಮಾನ್ ಖಾನ್ ಅವರ ಆಸ್ತಿಗಳ ಖರೀದಿಗೆ ಹಣ ಎಲ್ಲಿಂದ ಬಂದಿದೆ? ಎಂದು ಅವರು ಹುಡುಕಾಟ ನಡೆಸಿದ್ದಾರೆ.
ಶಿವಮೊಗ್ಗ ಮೂಲದ ಸುಲೇಮಾನ್ ಖಾನ್ ಎಲ್ಲಡೆ ಸಿದ್ದಿಕ್ ಖಾನ್ ಎಂದೇ ಪರಿಚಿತರು. ಕಾರವಾರದಲ್ಲಿ ಸುಮಾರು ಐದು ವರ್ಷ ವಾಸವಾಗಿದ್ದ ಅವರು ಗೋವಾಗೆ ತೆರಳಿ ನಕಲಿ ದಾಖಲೆಗಳ ಮೂಲಕ ಆಸ್ತಿ ಖರೀದಿಸಿದ್ದರು. ಸಾವನಪ್ಪಿದವರ ಹೆಸರಿನಲ್ಲಿದ್ದ ಭೂಮಿಯನ್ನು ಅವರು ಕಬಳಿಸಿದ ಆರೋಪ ಎದುರಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಗೋವಾ ಎಸ್ಐಟಿ 2024ರಲ್ಲಿ ಸಿದ್ದಿಕ್ ಖಾನ್ನನ್ನು ಬಂಧಿಸಿತ್ತು. ಜೈಲಿನಿಂದ ಪರಾರಿಯಾದ ಬಳಿಕ ಕೇರಳದಲ್ಲಿ ಮತ್ತೆ ಬಂಧಿಸಲಾಗಿದ್ದು, ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಡಿ ತನಿಖೆ ಶುರುವಾಗಿದೆ.