ಬಗ್ಗೋಣ ಕ್ರಾಸಿನ ಬಳಿಯಿರುವ ಇನ್ಪಿನಿಟಿ ಪಾರ್ಕ ವಿವ್ ಪ್ರೋಜೆಕ್ಟ್’ನ ಅಪಾರ್ಟಮೆಂಟ್ ಕಟ್ಟಡದಿಂದ ಕಾರ್ಮಿಕರೊಬ್ಬರು ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ.
ಕುಮಟಾದ ಬಗ್ಗೋಣ ಕ್ರಾಸಿನ ಬಳಿ ಇನ್ಪಿನಿಟಿ ಪಾರ್ಕ ವಿವ್ ಪ್ರೋಜೆಕ್ಟ್ ಅವರ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹುಬ್ಬಳ್ಳಿಯ ಇನ್ಪಿನಿಟಿ ಪಾರ್ಕ ವಿವ್ ಪ್ರೋಜೆಕ್ಟ್’ನ ಮಂಜುನಾಥ ಹೆಗಡೆ ಅವರು ಅಲ್ಲಿ 2&3 ಬಿ ಎಚ್ ಕೆ ಅಪಾರ್ಟಮೆಂಟ್ ನಿರ್ಮಿಸುತ್ತಿದ್ದಾರೆ. ಇದಕ್ಕೆ ಕುಮಟಾದ ಗಣಪತಿ ಮುಕ್ರಿ ಅವರನ್ನು ಮೇಸ್ತಿçಯಾಗಿ ನೇಮಿಸಿಕೊಂಡಿದ್ದಾರೆ. ಮಂಜುನಾಥ ಹೆಗಡೆ ಹಾಗೂ ಗಣಪತಿ ಮುಕ್ರಿ ಅವರು ಸೇರಿ ಕಲಘಟಕಿಯ ರವಿ ಬಸಪ್ಪ ಕೆಳಗಿನಮನಿ ಅವರಿಗೆ ಉದ್ಯೋಗ ನೀಡಿದ್ದು, ಅವರು ಅಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಕಾರ್ಮಿಕ ರವಿ ಕೆಳಗಿನಮನಿ ಅವರು ಆ ಕಟ್ಟಡದಲ್ಲಿಯೇ ರಾತ್ರಿ ತಂಗುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕ ತಂಗುತ್ತಿದ್ದರೂ ಅಲ್ಲಿ ಸುರಕ್ಷತೆ ಕಲ್ಪಿಸಿರಲಿಲ್ಲ. ಕಾರ್ಮಿಕರ ವಸತಿಗೆ ಬೇರೆ ಕಡೆ ಜಾಗವನ್ನು ಕೊಟ್ಟಿರಲಿಲ್ಲ. ಹೀಗಿರುವಾಗ ಅಗಸ್ಟ 5ರ ರಾತ್ರಿ ಅಲ್ಲಿ ತಂಗಿದ್ದ ರವಿ ಕೆಳಗಿನಮನಿ ಅವರು ಕಟ್ಟಡದಿಂದ ಜಾರಿ ನೆಲಕ್ಕೆ ಬಿದ್ದರು. ತಲೆ ಹಾಗೂ ಮೈಗೆ ಪೆಟ್ಟಾದ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ನಂತರ ಹುಬ್ಬಳ್ಳಿ ಕೆ ಎಂ ಸಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದರು.