ಮರಾಠಿಕೊಪ್ಪದ ರಾಮಚಂದ್ರ ಕಗಾಲಕರ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. 8 ಲಕ್ಷ ರೂಪಾಯಿಗೂ ಅಧಿಕ ಬಂಗಾರ ಹಾಗೂ ಬೆಳ್ಳಿ ಕದ್ದು ಅವರು ಪರಾರಿಯಾಗಿದ್ದಾರೆ.
ಶಿರಸಿಯ ವಿದ್ಯಾನಗರ ಬಳಿಯ ಮರಾಠಿಕೊಪ್ಪದಲ್ಲಿ ರಾಮಚಂದ್ರ ನಾಗೇಶ ಕಗಾಲಕರ ಅವರು ವಾಸವಾಗಿದ್ದಾರೆ. ತಮ್ಮ ಉಳಿತಾಯದ ಹಣದಲ್ಲಿ ಅವರು ಬೆಳ್ಳಿ-ಬಂಗಾರ ಮಾಡಿಸಿಕೊಂಡಿದ್ದು, ಸದ್ಯ ಅದನ್ನು ಕಳ್ಳರು ಕದ್ದಿದ್ದಾರೆ. ಅಗಸ್ಟ 15ರ ಬೆಳಗ್ಗೆ 11 ಗಂಟೆಗೆ ರಾಮಚಂದ್ರ ಕಗಾಲಕರ ಅವರು ಮನೆಯಿಂದ ಹೊರಗೆ ಹೋಗಿದ್ದು, ಅಗಸ್ಟ 16ರ ರಾತ್ರಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಮನೆಯ ಮುಂದಿನ ಬಾಗಿಲು ಒಡೆದ ಕಳ್ಳರು ನೇರವಾಗಿ ರಾಮಚಂದ್ರ ಕಗಾಲಕರ ಅವರ ಮಗನ ರೂಮಿಗೆ ಹೋಗಿದ್ದಾರೆ. ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದವರಿಗೆ ಮೊದಲು 2 ಸಾವಿರ ರೂ ಹಣ ಸಿಕ್ಕಿದೆ. ಅದನ್ನು ಜೇಬಿಗಿಳಿಸಿದ ಕಳ್ಳರು ಇನ್ನಷ್ಟು ಹುಡುಕಾಟ ನಡೆಸಿದ್ದು, ಆಗ 30 ಗ್ರಾಂ ತೂಕದ ಚಿನ್ನ ಕಾಣಿಸಿದೆ. 3.10 ಲಕ್ಷ ರೂ ಮೌಲ್ಯದ ಆ ಚಿನ್ನವನ್ನು ಅವರು ಕದ್ದಿದ್ದಾರೆ. ಅದಾದ ನಂತರ ಇಡೀ ಮನೆ ಜಾಲಾಡಿ 5.50 ಲಕ್ಷ ರೂ ಮೌಲ್ಯದ 3 ಕೆಜಿ ಬೆಳ್ಳಿ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಕಳ್ಳರ ಕಾಟಕ್ಕೆ ಬೆದರಿದ ರಾಮಚಂದ್ರ ಕಗಾಲಕರ್ ಅವರು ಆ ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ಹೊಸ ಮಾರುಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ನಡೆಸಿದ್ದಾರೆ.